ಭಾರತದಲ್ಲಿ ದೇವಾಲಯಗಳ ನಿರ್ಮಾಣ ಏಕೆ ಆರಂಭ ವಾಯಿತು?
ವೇದಗಳನ್ನು ಅಪಾರ್ಥಮಾಡಿಕೊಂಡವರು ಯಜ್ಞ ಯಾಗಗಳಲ್ಲಿ ಪ್ರಾಣಿಬಲಿಯನ್ನು ಆರಂಭಿಸಿದರು. ಅದು ವಿಕೋಪಕ್ಕೆ ಹೋದಾಗ ಸಮಾಜ ಸುಧಾರಕರಾಗಿ ಜೈನ ಹಾಗೂ ಬೌದ್ಧ ಮತಗಳು ಬೆಳೆದವು. ಇದು ಕೂಡಾ ಅಗತ್ಯಕ್ಕಿಂತ ಹೆಚ್ಚು ವಿಕೋಪಕ್ಕೆ ಹೋಗತೊಡಗಿ ಎಲ್ಲರೂ ಸಂಸಾರಬಿಟ್ಟು ಸನ್ಯಾಸಿಗಳೂ ಭಿಕ್ಷುಗಳೂ ಆಗಿ ದುಡಿಮೆ ಬಿಟ್ಟು ಸೋಮಾರಿಗಳಾಗ ತೊಡಗಿದರು. ಹೀಗೆ ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ಗಮನಿಸಿದ ಹಿರಿಯರು ನಮ್ಮ ವೇದಾಧಾರಿತ ಮೂಲ ಸಂಸ್ಕೃತಿಯನ್ನು ಉಳಿಸಲು ಪುರಾಣೋಕ್ತ ದೇವರ ಕಲ್ಪನೆಗಳಿಗೆ ರೂಪ ಕೊಟ್ಟು ಹಿಂಸೆ ರಹಿತವಾದ ಮಾನವನ ಜೀವನ ಪದ್ದತಿಗೆ ಅನುರೂಪವಾಗಿ ತನ್ನಂತೆಯೇ ಭಗವಂತನೆಂದು ಕಲ್ಪಿಸಿ ತಾನು ಬದುಕಿಗಾಗಿ ಬಳಸುವ ವಸ್ತುಗಳೆಲ್ಲವೂ ಭಗವಂತನ ಅನುಗ್ರಹ ಪ್ರಸಾದ ಆದುದರಿಂದ ತಾನು ಬದುಕಲು ಬಳಸುವ ಪ್ರತಿಯೊಂದನ್ನೂ ಭಗವಂತನಿಗೆ ಅರ್ಪಣಾಭಾವದಿಂದ ಮನಃಪೂರ್ವಕವಾಗಿ ಅರ್ಪಿಸಿ ಪ್ರಸಾದರರೂಪದಲ್ಲಿ ಬಳಸಬೇಕೆಂಬ ಸದುದ್ದೇಶದಿಂದ ಹಾಗೂ ತನ್ನ ಬದುಕು ಭಗವಂತನ ಅನುಗ್ರಹಕ್ಕೆ ಆಶಯಕ್ಕೆ ತಕ್ಕುದಾಗಿರಬೇಕೆಂಬ ಉದ್ದೇಶದಿಂದ ಹಿಂಸೆರಹಿತ ಸಾಧನಾ ಮಾರ್ಗಗಳನ್ನು ಕಂಡುಕೊಂಡನು. ಇದುವೇ ದೇವರ ಮೂರ್ತಿಗಳ ಕಲ್ಪನೆ. ಇದುವೇ ದೇವಸ್ಥಾನಗಳ ಉಗಮಕ್ಕೆ ಕಾರಣವಾಯಿತು. ದೇವಸ್ಥಾನಗಳು ಪವಿತ್ರ ಸ್ಥಳವೆಂದೂ ಇಲ್ಲಿ ಸ್ವಚ್ಚತೆ ಶುದ್ಧತೆಗೆ ಮಹತ್ವ ಕೊಡಬೇಕೆಂದು ಸಾರಿದರು. ಯಜ್ಞ ಯಾಗಗಳನ್ನು ತಿರಸ್ಕರಿಸಿ ವೇದಗಳನ್ನು ನಿರಾಕರಿಸುತ್ತಿದ್ದ ಬೌದ್ಧ ಜೈನರಿಂದ ಸನಾತನ ವೇದ ಸಂಸ್ಕೃತಿಯನ್ನು ಉಳಿಸಲು ದೇವಸ್ಥಾನದ ಕಲ್ಪನೆಯನ್ನು ತಂದಾಗ ಇದನ್ನು ಖಂಡಿಸುವುದು ಅವರಿಂದ ಆಗಲಿಲ್ಲ. ಏಕೆಂದರೆ ಇಲ್ಲಿ ಪ್ರಾಣಿಹಿಂಸೆ ಇರಲಿಲ್ಲ. ದೇವರಿಗೆ ಮಾಂಸಾಹಾರ ಸಮರ್ಪಿಸುವಂತಿರಲಿಲ್ಲ, ಅಶುದ್ಧರಾಗಿ ಸ್ನಾನಮಾಡದೆ ಬರುವಂತಿರಲಿಲ್ಲ. ಅರ್ಚಕರು ಶಾಖಾಹಾರಿಗಳಾಗಿರುತ್ತಿದ್ದರು. ಹೀಗೆ ವೇದೋಕ್ತ ಪೂಜಾಪದ್ದತಿ ಜಾರಿಗೆ ತಂದಾಗ ಬೌದ್ಧ ಹಾಗೂ ಜೈನ ವಿಚಾರಗಳಿಗೆ ಒಂದು ಪ್ರತಿರೋಧ ಸೃಷ್ಟಿಯಾಗಿ ವೇದಸಂಸ್ಕೃತಿ ಆಚರಿಸುವವರಿಗೆ ಒಂದು ಹೊಸಮಾರ್ಗ ದೊರೆತಂತಾಗಿ ರಾಜರು ಹಾಗೂ ಶ್ರೀಮಂತರು ಎಲ್ಲೆಲ್ಲೂ ದೇವಾಲಯಗಳನ್ನು ಕಟ್ಟಿಸ ತೊಡಗಿದರು.ಶಿವ, ವಿಷ್ಣು, ದೇವಿ, ಗಣಪತಿ,ರಾಮ, ಕೃಷ್ಣ, ಸುಬ್ರಮಣ್ಯ, ಆಂಜನೇಯ, ಮುಂತಾದವರು ಜನಪ್ರಿಯ ದೇವರಾಗಿ ಎಲ್ಲೆಡೆ ಹೊರಹೊಮ್ಮಿದರು. ಅಗತ್ಯಕ್ಕೆ ತಕ್ಕಂತೆ ಶಿಲ್ಪಶಾಸ್ತ್ರ, ವಾಸ್ತುಶಾಸ್ತ್ರ, ಆಗಮಶಾಸ್ತ್ರ, ಗಳು ರಚಿಸಲ್ಪಟ್ಟವು. ದೇವಸ್ಥಾನಗಳು ಸಂಸ್ಕೃತಿಯ ಪೋಷಕ ಸ್ಥಳಗಳಾದುವು ಮನರಂಜನೆಗಾಗಿ ನಾಟ್ಯ ಶಾಸ್ತ್ರ ಸಂಗೀತ ಶಾಸ್ತ್ರಗಳು ರಚಿಸಲ್ಲಪಟ್ಟು ಮುನ್ನೆಲೆಗೆ ಬಂದವು. ದೇವಾಲಯಗಳು ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಸಹಾಯ ಮಾಡಿದುವು. ದೇವರ ಪೂಜೆಯ ಭಾಗವಾಗಿ ನಮ್ಮ ಕಲೆ ಸಂಸ್ಕೃತಿಯು ದಿನ ನಿತ್ಯ ದೇವರಿಗೆ ಸೇವಾರೂಪದಲ್ಲಿ ಅರ್ಪಣೆಗೊಳ್ಳ ತೊಡಗಿದುವು, ವೇದ, ಸಂಗೀತ, ನೃತ್ಯ, ಗೀತ, ನಾದ, ಹಾಲು, ಹಣ್ಣು, ಹೂವು, ಇವೆಲ್ಲವೂ ದೇವರಪೂಜೆಯ ಅಂಗವಾಗಿ ಸಂಸ್ಕೃತಿಯು ಬೆಳೆದು ಬಂದಿತು. ಹಾಗೂ ಉಳಿದು ಕೊಂಡಿತು. ಮುಂದೆ ಸಮಾಜದ ಸಾಮರಸ್ಯವನ್ನು ಕಾಪಾಡಲು ಹಾಗೂ ದೇವರು ಕೇವಲ ಪೂಜೆಮಾಡುವವರ ಸ್ವತ್ತು ಎನ್ನುವ ಭಾವನೆ ಜನರಲ್ಲಿ ಬರತೊಡಗಿದಾಗ ಪುನಃ ಸರ್ವಸಮಾಜವನ್ನೂ ಒಂದುಗೂಡಿಸಲು. ಎಲ್ಲಾವರ್ಗದವರಿಗೂ ದೇವರನ್ನು ತಲುಪಿಸಲು, ಜನರಲ್ಲಿರುವ ಪ್ರತ್ಯೇಕತಾ ಭಾವನೆಯನ್ನು ಹೋಗಲಾಡಿಸಲು, ವಾರ್ಷಿಕೋತ್ಸವಗಳಲ್ಲಿ ಸರ್ವರ ಸಹಭಾಗಿತ್ವದಲ್ಲಿ ಉತ್ಸವಗಳನ್ನು ಆರಂಭಿಸಿದರು ಸಾಮೂಹಿಕ ಅನ್ನದಾನ. ರಸ್ತೆಯಲ್ಲಿ ತೇರನ್ನಿಟ್ಟು ಅದರಲ್ಲಿ ದೇವರನ್ನಿಟ್ಟು ಎಲ್ಲಾವರ್ಗದವರೂ ಅದನ್ನು ಒಟ್ಟಾಗಿ ಎಳೆಯುವ ವ್ಯವಸ್ಥೆ ಮುಂತಾದುವು ಎಲ್ಲಾವರ್ಗದ ಜನ ಒಟ್ಟಾಗಿ ಸಾಗಬೇಕೆಂಬ ಉದ್ದೇಶ ಇಟ್ಟುಕೊಂಡು ಅಸ್ಪೃಶ್ಯತೆ ನಿವಾರಣೆಗಾಗಿ ಜಾರಿಗೆತಂದ ಸುಧಾರಣಾ ಕ್ರಮಗಳಾಗಿವೆ. ಆಗ ಎಲ್ಲಾವರ್ಗದಜನರಿಗೂ ದೇವರ ರಥವನ್ನು ಸ್ವತಃ ಎಳೆಯುವ ಅವಕಾಶ ಪ್ರತಿ ವರ್ಷವೂ ದೊರೆಯುವಂತಾಯಿತು. ಮುಂದೆ ಸ್ವಾತಂತ್ರ ಹೋರಾಟಸಮಯದಲ್ಲಿ ಜನರನ್ನು ಒಗ್ಗೂಡಿಸಲು ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಉತ್ಸವವಾಗಿ ಎಲ್ಲಾವರ್ಗದವರಿಂದ ಆಚರಿಸಲ್ಪಟ್ಟು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದೆ. ಸರ್ವ ಸಮುದಾಯದವರೂ ಇಂದು ಸಾರ್ವಜನಿಕ ಗಣಪತಿ ಉತ್ಸವ ಮಾಡುತ್ತಿದ್ದಾರೆ. ಇಂತಹ ಸಾರ್ವಜನಿಕ ಆಚರಣೆಗಳು ಹಿಂದೂಗಳನ್ನು ಒಂದುಗೂಡಿಸುತ್ತಿವೆ. ಹೀಗೆಯೇ ನವರಾತ್ರಿಯಲ್ಲಿ ದುರ್ಗಾಪೂಜೆ, ಐಯ್ಯಪ್ಪ ವ್ರಧಾರಿಗಳ ವ್ರತ ನಿಯಮ ಕುಂಭಮೇಳದಂತ ಉತ್ಸವ ಇವೆಲ್ಲವೂ ಸರ್ವಭಕ್ತರ ಸಮೂಹಿಕ ಸಮಾಗಮಕ್ಕೆ ವೇದಿಕೆ ಆಗಿವೆ.
- ಶ್ರೀಜಿ