ಪುರಾಣಗಳಲ್ಲಿ ಬಹು ದೇವತಾ ಕಲ್ಪನೆ ಹೇಗೆ ಆರಂಭವಾಯಿತು? ಪರಮಾತ್ಮನಿಗೂ ದೇವರಿಗೂ ಇರುವ ವ್ಯತ್ಯಾಸ ಏನು? ಹಿಂದೂಗಳ ಪ್ರಮುಖ ದೇವರುಗಳು ಯಾರು?
ಪರಮಾತ್ಮ ಸರ್ವಗುಣ ಸಂಪನ್ನ ನಾದರೆ! ದೇವ ದೇವತೆಗಳು ಭಗವಂತನ ಪ್ರಧಾನ ಗುಣ ರೂಪಗಳು ಅಥವಾ ವಿಶೇಷ ಗುಣಗಳ ಪ್ರತಿನಿಧಿಗಳಾಗಿದ್ದಾರೆ. ಅವುಗಳಲ್ಲಿ ಅತೀ ಮುಖ್ಯವಾದ ಸೃಷ್ಟಿ, ಸ್ಥಿತಿ, ಲಯ ಈ ಮೂರು ಕಾರಣಗಳಿಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ತ್ರಿಮೂರ್ತಿಗಳ ಉದಯ ವಾಯಿತು. ಹೀಗೆ ಗುಣಕಾರ್ಯಗಳಿಗೆ ರೂಪಕೊಡುವ ಮೂಲಕ ಪುರಾಣ ಕಥೆಗಳ ಪಾತ್ರಗಳು ಸೃಷ್ಟಿಯಾದುವು. ಸೃಷ್ಟಿಕರ್ತ ಪರಮಾತ್ಮನಲ್ಲಿರುವ ಸದ್ಗುಣಗಳಲ್ಲಿ ಮುಖ್ಯವಾದ ಮೂರುಣಗಳನ್ನು ಪರಿಗಣಿಸಿ ಇವುಗಳನ್ನು ಪ್ರತಿನಿಧಿಸುವ ಮೂರು ದೇವರುಗಳ ಪೌರಾಣಿಕ ಕಲ್ಪನೆಯಲ್ಲಿ ಪಾತ್ರಗಳನ್ನು ಸೃಷ್ಟಿಸಿ ಪುರಾಣಗಳನ್ನು ರಚಿಸಿದರು, ಈ ಮೂರುಗುಣಗಳೇ ತ್ರಿಗುಣಗಳಾದ ಸಾತ್ವಿಕ, ರಾಜಸ, ತಾಮಸ, ಗುಣಗಳು. ಲಕ್ಷಣ ಸೃಷ್ಟಿ, ಸ್ಥಿತಿ, ಲಯ. ಭಗವಂತನ ಈ ಮೂರು ಗುಣಗಳ ಪ್ರಕಟಿತ ರೂಪವೇ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ, ಇವರೇ ಹಿಂದೂ ಸಂಸ್ಕೃತಿಯ ಪ್ರಧಾನವಾದ ದೇವರು ಗಳಾಗಿದ್ದಾರೆ. ಈ ಮೂರೂ ಗುಣಗಳ ಮೂಲ ರೂಪ ಒಂದೇ ಆಗಿದೆ. ಆದುದರಿಂದ ಇಲ್ಲಿ ಶಿವನನ್ನು ತಾಮಸ ಗುಣಪ್ರಧಾನ ಎಂದು ತಪ್ಪು ತಿಳಿಯಬೇಕಿಲ್ಲ, ಶಿವ ನ್ನುವುದು ಪರಮಾತ್ಮನ ಲಯರೂಪವಾಗಿದೆ. ಶಿವ ಬೇರೆಯಲ್ಲ ವಿಷ್ಣು ಬೇರೆಯಲ್ಲ ಈ ಕಲ್ಪನೆ ಸಾಮರಸ್ಯಕ್ಕೆ ಅತಿಮುಖ್ಯವಾಗಿದೆ. ಈ ಮೂವರು ತ್ರಿಮೂರ್ತಿಗಳೇ ಹಿಂದು ಸಂಸ್ಕೃತಿಗೆ ಆಧಾರ ಸ್ಥಂಭ ವಾಗಿದ್ದಾರೆ. ಹಿಂದೂ ಸಂಸ್ಕೃತಿಯಿಂದ ಪ್ರೇರಣೆ ಪಡೆದ ಆಂಗ್ಲರು.ಹಿಂದುಗಳ ಈ ಕಲ್ಪನೆಯನ್ನೇ ಅನುಕರಿಸಿ GOD ಎಂದು ಕರೆದಿದ್ದಾರೆ. GOD = Generator Operator and Destroyer ಎಂಬುದೇ ಆಗಿದೆ. ಅವರು ತ್ರಿಮೂರ್ತಿ ರೂಪವನ್ನು ಅನುಕರಿಸಿಲ್ಲ ಆದರೆ ತ್ರಿಮೂರ್ತಿಗಳ ಗುಣಕಾರ್ಯಗಳನ್ನು ಒಪ್ಪಿದ್ದಾರೆ. ಇದುವೇ ಸೃಷ್ಟಿ ಸ್ಥಿತಿ ಹಾಗೂ ಲಯವಾಗಿದೆ. ಈ ಮೂರು ಪ್ರಕ್ರಿಯೆಗಳು ಪ್ರಕೃತಿಯಲ್ಲಿ ನಿರಂತರ ನಡೆಯುವ ಕ್ರಿಯೆಗಳು,
ಪರಮಾತ್ಮನ ಕೆಲಸಗಳು ಅಥವಾ ಗುಣಗಳಿಗೆ ಆಕಾರ ರೂಪ ಕೊಟ್ಟಾಗ ಬ್ರಹ್ಮ ,ವಿಷ್ಣು, ಮಹೇಶ್ವರರು ರೂಪುಗೊಂಡರು. ಈ ಮೂರರಲ್ಲಿ ಯಾವಪ್ರಕ್ರಿಯೆ ಕೊರತೆಯಾದರೂ ಸೃಷ್ಟಿ ಮುಂದುವರಿಯುವುದಿಲ್ಲ. ಹುಟ್ಟು ನಿಂತರೂ, ಅಥವಾ ಹುಟ್ಟಿದವರು ಸಾಯದೇ ಇದ್ದರೂ, ಅಥವಾ ಹುಟ್ಟುವುದು ಸಾಯುವುದು ಎರಡರ ನಡುವೆ ಬದುಕಿಗೆ ಅವಕಾಶವಿಲ್ಲದಿದ್ದರೂ! ಈ ಜೀವ ಜಗತ್ತು ನಡೆಯಲಾರದು. ಆದುದರಿಂದ ಭಗವಂತನ ಈ ನಿರಂತರ ಪ್ರಕ್ರಿಯೆಯ ಪ್ರತಿನಿಧಿಗಳೇ ಬ್ರಹ್ಮ ವಿಷ್ಣು ಮಹೇಶ್ವರರಾಗಿದ್ದಾರೆ, ಇವರಲ್ಲಿ ಭಿನ್ನತೆ ಅಥವಾ ಹೆಚ್ಚು ಕಡಿಮೆ ಎನ್ನುವುದಿಲ್ಲ. ಒಬ್ಬ ಕಲಾವಿದ ಹಲವು ಪಾತ್ರಗಳನ್ನು ಮಾಡಿದಂತೆ. ಇಲ್ಲಿ ಭಗವಂತನೇ ಕಲಾವಿದ. ದೇವರು ದೇವತೆಗಳು ಅವತಾರಪುರುಷರೆಲ್ಲಾ ಅವನ ವಿಭಿನ್ನ ಪಾತ್ರರೂಪಗಳು ಮಾತ್ರ. ಕೇವಲ ಮೂರು ಪಾತ್ರಗಳಿಂದಷ್ಟೇ ಹೇಳಬೇಕಾಗಿದ್ದನ್ನೆಲ್ಲಾ ಹೇಳುವುದಕ್ಕಾಗುವುದಿಲ್ಲವಾದ್ದರಿಂದ ಭಗವಂತನ ಒಂದೊಂದು ವಿಭಿನ್ನ ಗುಣಗಳನ್ನು ಹೇಳಲು ಒಂದೊಂದು ಪಾತ್ರಗಳ ಸೃಷ್ಟಿಆಯಿತು. ಇಲ್ಲವೇ ಭಗವಂತನ ವಿಶೇಷಗುಣಗಳನ್ನು ತಮ್ಮ ಜೀವನದಲ್ಲಿ ಪ್ರಕಟಿಸಿದವರನ್ನು ದೇವರು ಎಂದು ಕರೆಯಲಾಯಿತು. ಸಾಮಾನ್ಯ ಮನುಷ್ಯರಿಗೆ ಅರ್ಥವಾಗಬೇಕಿದ್ದಲ್ಲಿ ಅವರ ಜೀವನ ಅನುಭವಕ್ಕೆ ಅನುಕೂಲವಾಗುವ ರೀತಿಯಲ್ಲಿ ಧರ್ಮಸೂಕ್ಷ್ಮಗಳನ್ನು ಹೇಳಬೇಕು ಹಾಗೂ ಬದುಕಿಗೆ ಪ್ರೇರಣೆ ಸಿಗಬೇಕು ಎನ್ನುವ ದೃಷ್ಟಿಯಿಂದ ಜನಸಾಮಾನ್ಯರಿಗೆ ಅರ್ಥವಾಗುವಂತೆಯೂ ಅನುಕರಣೆಗೆ ಯೋಗ್ಯವಾಗಿಯೂ ಶಾಸ್ತ್ರಗಳು ಇರಬೇಕೆಂದು ಈ ದೇವರುಗಳಿಗೂ ನಮ್ಮಂತೆಯೇ ಜೀವಿಸುವ ಕಲ್ಪನೆ ಕೊಡಲಾಯಿತು. ಅವರಿಗೂ ಹೆಂಡತಿ, ಮಕ್ಕಳು, ವಿವಾಹ, ಸಂಸಾರ, ಎಲ್ಲವನ್ನೂ ಕಲ್ಪಸಲಾಯಿತು. ಎಲ್ಲರಿಗೂ ಒಂದೊಂದು ಹೆಸರು ಕೊಡಲಾಯಿತು. ದೇವರ ಪರಿವಾರಗಳನ್ನು ದೇವತೆಗಳೆಂದು ಕರೆದರು. ಪ್ರತಿಯೊಂದು ದೇವರುಗಳೂ ದೇವತೆಗಳೂ ಒಂದೊಂದು ವಿಶೇಷ ಗುಣಗಳನ್ನು ಹೊಂದಿದ್ದು ಅವುಗಳ ಪ್ರತಿನಿಧಿಗಳೆನಿಸಿಕೊಂಡರು. ಮುಂದೆ ಭಕ್ತರು ಇಂತಹ ದೇವರುಗಳಲ್ಲಿಯೇ ವಿಶೇಷಗುಣದೊಂದಿಗೆ ಸರ್ವಗುಣಗಳನ್ನೂ ಕಾಣತೊಡಗಿದರು. ಹೀಗೆ ಒಂದೊಂದು ದೇವರುಗಳೂ ವಿವಿಧ ರೂಪಗಳನ್ನು ಪಡೆದರು. ಹೀಗೆ ದೇವರ ವಿವಿಧಗುಣಗಳ ಆಧಾರದ ಮೇಲೆ ಶತನಾಮ, ಸಹಸ್ರನಾಮಾವಳಿಗಳ ರಚನೆ ಆಯಿತು. ದೇವರ ಹೆಂಡತಿಯರಿಗೆ ದೇವಿ ಎಂದು ಕರೆದರೆ ಪರಿವಾರದವರಿಗೆ ದೇವತೆಗಳು, ಗಣಗಳು, ಎಂದು ಕರೆದರು ದೇವರ ಕಾರ್ಯಕ್ಕೆ ಸಹಾಯಮಾಡುವ ಕೆಲಸವನ್ನು ದೇವತೆಗಳಿಗೆ ಕಲ್ಪಿಸಿದರು. ಹೀಗೆ ಪರಮಾತ್ಮವ ವಿವಿಧ ಗುಣಗಳು ವಿವಿಧರೂಪ ಪಡೆದು ಬಹುದೇವತಾರಾಧನೆ ಆರಂಭವಾಯಿತು. ಮತ್ತು ಅಂತಹ ದೇವರುಗಳನ್ನೂ ಪುನಃ ಬಹುರೂಪ ದಲ್ಲಿ ನೋಡಲಾಗಿ ಸಂಸ್ಕೃತಿ ವಿಸ್ತಾರ ವಾಯಿತು. ಹೀಗೆ ಇಂದು ನಾವು ಪೂಜಿಸುವ ಆರಾಧಿಸುವ ಎಲ್ಲಾ ದೇವ ದೇವತೆಗಳ ಕಲ್ಪನೆಯ ಮೂಲ ಒಬ್ಬನೇ ಪರಮಾತ್ಮನಾಗಿದ್ದಾನೆ. ಅಥವಾ ಒಂದೇ ಶಕ್ತಿ ಕೇಂದ್ರವಾಗಿದೆ. ಹಾಗೂ ದೇವರು ದೇವತೆಗಳೆಲ್ಲಾ ಆತನ ಗುಣದ ಪ್ರತೀಕಗಳಾಗಿದ್ದಾರೆ. ಇವರೆಲ್ಲಾ ಬೇರೆ ಬೇರೆ ಇವರಲ್ಲಿ ವಿಷ್ಣುಶ್ರೇಷ್ಠ ಉಳಿದವರು ಆತನ ಸಹಾಯಕರು ಎಂದು ದ್ವೈತ ಸಿದ್ದಾಂತ ಹೇಳುತ್ತದೆ. ಶಿವನೇ ಹೆಚ್ಚೆನ್ನುವ ಶೈವ ಸಿದ್ದಾಂತ ವಿದೆ. ಹೀಗೆ ತಮ್ಮದೇವರೇ ಶ್ರೇಷ್ಠ ಎನ್ನುವ ಹಲವು ಮತಗಳಿವೆ. ಇದು ಅಜ್ಞಾನವಾಗಿದೆ. ಇದು ವಿಭಾಜಕ ಸಿದ್ಧಾಂತ ವಾಗಿದ್ದು ಸಮಾಜದ ಹಾಗೂ ಸಮಷ್ಟಿಯ ಏಕತೆಗೆ ಧಕ್ಕೆತರುತ್ತದೆ. ಇಂತಹ ತಾರತಮ್ಯದಿಂದ ದ್ವೇಷ ಬೆಳೆದು ಧರ್ಮ ನಾಶವಾಗುತ್ತದೆ. ಆದುದರಿಂದ. ಎಲ್ಲಾ ದೇವತೆಗಳೂ ಪರಮಾತ್ಮನ ಭಿನ್ನರೂಪಗಳು ಎಲ್ಲಾ ಹಿಂದುಗಳೂ ಭಾರತ ಮಾತೆಯ ಪುತ್ರರು ಎನ್ನುವ ಭಾವದಿಂದ ನಾವು ಬದುಕಬೇಕಿದೆ. ದುರ್ಬಲ ವರ್ಗವಿದ್ದರೆ, ದೌರ್ಜನ್ಯ ಮಾಡುವುದು, ಅಪಹಾಸ್ಯಮಾಡುವುದು, ಶೋಷಣೆ ಮಾಡವುದು ಮನುಷ್ಯತ್ವವಲ್ಲ. ಅಂತಹವರನ್ನು ಅನುಕಂಪ ಪ್ರೀತಿ ಹಾಗೂ ವಿಶೇಷ ವಾತ್ಸಲ್ಯದಿಂದ ಮೇಲೆತ್ತಬೇಕು. ತಾರತಮ್ಯದಿಂದ ಏಕತೆಯ ನಾಶವೇ ಹೊರತು ಸಮಾಜ ಮತ್ತು ಹಿಂದೂಗಳು ಒಗ್ಗಟ್ಟು ಹೊಂದುವುದು ಸಾಧ್ಯವಿಲ್ಲ. ಆದುದರಿಂದ ಬೇಧ ಸಿಧ್ಧಾಂತವನ್ನು ವಿದ್ವಜ್ಜನರು ತಮ್ಮ ವ್ಯಾಪ್ತಿಯೊಳಗೆ ಚರ್ಚಿಸಬೇಕೇ ಹೊರತು ಸಾರ್ವಜನಿಕವಾಗಿ ಪ್ರಚಾರಕ್ಕಿಳಿಯುವುದರಿಂದ ಸಮಾಜಕ್ಕೆ ಹಾನಿಯುಂಟಾಗುವುದು. ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದು. ಇದರಿಂಮದ ದೇಶ ಹಾಗೂ ಧರ್ಮ ದುರ್ಬಲವಾಗುವುದು. ನಮ್ಮದು ಹಿಂದೂ ಧರ್ಮವಲ್ಲ ಸ್ವತಂತ್ರಧರ್ಮ ಎನ್ನುವ ಮೂರ್ಖರಬಗ್ಗೆ ಎಚ್ಚರ ವಹಿಸಬೇಕು. ಜಗತ್ತಿನ ಗುಣಗಳಲ್ಲಿ ಸಕಾರಾತ್ಮಕ ದಂತೆಯೇ ನಕಾರಾತ್ಮಕ ಗುಣವೂ ಇದೆ. ಇದರಮೂಲವೂ ಭಗವಂತನೇ ಎಂದು ತಿಳಿಯಬೇಕು. ಸರ್ವಶಕ್ತಿಮೂಲವೂ ಆತನೇ ಆಗಿದ್ದಾನೆ. ಈ ನಕಾರಾತ್ಮಕ ಅಂಶಗಳನ್ನು ಪ್ರತಿನಿಧಿಸಿದವರನ್ನು ಅಸುರರು, ರಾಕ್ಷಸರು ಎಂಬುದಾಗಿ ರೂಪಕೊಟ್ಟು ಅವರ ನಾಶಕ್ಕೆ ದೇವರುಗಳು ಮಾರ್ಗದರ್ಶನ ಮಾಡುವಂತೆ ಪ್ರೇರಣೆಯಾಗುವಂತೆ ಪುರಾಣಗಳನ್ನು ಸೃಷ್ಟಿಸಿದ್ದಾರೆ. ಈ ಪುರಾಣಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನಡುವಿನ ಹೋರಾಟದ ಮಾದರಿಯಾಗಿದ್ದು ಜನರನ್ನು ಸಕಾರಾತ್ಮಕ ಗುಣದಲ್ಲಿ ಬದುಕಲು ಪ್ರೇರಣೆ ಕೊಡುವ ಹಾಗೂ ಮಾರ್ಗದರ್ಶನ ನೀಡುವ ಮಹಾನ್ ಸಾಹಿತ್ಯಗಳಾಗಿವೆ. ಅವುಗಳಲ್ಲಿ ನಮ್ಮ ಜೀವನದ ಉನ್ನತಿಗೆ ಬೇಕಾದ ಅಂಶಗಳನ್ನು ಪಡೆದು ಕೊಂಡು ಅನಗತ್ಯವಾದುದನ್ನು ನಿರ್ಲಕ್ಷಿಸಬೇಕಾದುದು ಬುದ್ದಿವಂತರ ಹಾಗೂ ವಿವೇಕಿಗಳ ಲಕ್ಷಣವಾಗಿದೆ. ಅದನ್ನು ಬಿಟ್ಟು ಮೌಢ್ಯದಿಂದ ವಿತಂಡ ವಾದಮಾಡುವುದು, ಪುರಾಣದಲ್ಲಿರುವುದನ್ನೆಲ್ಲಾ ಸತ್ಯವೆಂದು ಸಾಧಿಸುತ್ತೇನೆಂದು ವಾದಮಾಡುವುದು, ಪ್ರತಿಪಾದಿಸಲು ಹೆಣಗಿ ಅಪಹಾಸ್ಯಕ್ಕೀಡಾಗುವುದು ಇವೆಲ್ಲಾ ಮೂರ್ಖತನದ ಪರಮಾವಧಿಯಾಗಿದೆ. ಯಾವುದೇ ಪುರಾಣಗಳನ್ನು ನಡೆದ ಘಟನೆ ಎಂದು ನಿರೂಪಿಸಲು ಸಾಕ್ಷ ಒದಗಿಸಲು ನಮ್ಮಿಂದ ಸಾಧ್ಯಇಲ್ಲ ಎನ್ನುವ ಅರಿವು ನಮಗೆ ಇರಬೇಕಾದುದು ಅಗತ್ಯ. ಅದು ನಂಬಿಕೆಯ ವಿಷಯವಾಗಿದೆ, ಪುರಾಣಗಳಲ್ಲಿ ಬರುವ ಅತಿಮಾನುಷ ಕಥೆಗಳನ್ನು ಅದರ ತತ್ವಗಳ ಆಧಾರದಮೇಲೆ ಸ್ವೀಕರಿಸುವುದು ಸೂಕ್ತವೇ ಹೊರತು ಕಥೆ ಇದ್ದಹಾಗೇ ಘಟನೆ ಘಟಿಸಿದೆ ಎಂದು ವಾದಿಸುವುದು ನಿರೂಪಿಸಲಾಗದ ವ್ಯರ್ಥ ವಾದವಾದೀತು. ಆದರೂ ಅದರಲ್ಲಿನ ಅನೇಕ ವಿಷಯಗಳು ಸಮಾಜದ ಹಲವು ವಿಷಯಗಳನ್ನು ಒಳಗೊಂಡಿದ್ದು ಹಲವು ವಿಚಾರಗಳು ಕಾಲ್ಪನಿಕ ರೋಚಕತೆಯಿಂದಲೂ ಕೂಡಿದೆ ಎನ್ನುವುದನ್ನು ನಾವು ಒಪ್ಪಬಹುದು. ಎಲ್ಲವೂ ಕಲ್ಪನೆಯಲ್ಲ ಎಲ್ಲವೂ ವಾಸ್ತವವೂ ಅಲ್ಲ ಎನ್ನುವುದೇ ಸತ್ಯ. ಇಲ್ಲಿ ನಮ್ಮ ಬುದ್ದಿಯಿಂದ ವಿವೇಚಿಸಿ ನಾವು ಸತ್ಯವನ್ನು ಅರಿತು ಮೌಢ್ಯವನ್ನು ಕಡೆಗಣಿಸಬೇಕು. ಎಲ್ಲಕ್ಕಿಂತ ಹೆಚ್ಚು ಇವುಗಳಲ್ಲಿಯ ಸಕಾರಾತ್ಮಕ ಮೌಲ್ಯಗಳನ್ನು ಅರಿತು ಅಳವಡಿಸಿಕೊಂಡು ಬದುಕೋಣ. ದೇವರೆಂದರೆ ಜೀವನ ಮೌಲ್ಯಗಳು ಎನ್ನಬಹುದು. ಅಥವಾ ಮೌಲ್ಯಗಳ ಬೀಜಾಂಕುರ ವಾಗಿದೆ.
ಹಿಂದು ಸಂಸ್ಕೃತಿಯ ಭಾಗವಾದ ಮೂವರು ಮುಖ್ಯ ದೇವರುಗಳಾದ ಬ್ರಹ್ಮ, ವಿಷ್ಣು ಹಾಗೂ ಶಿವ ಇವರು ಪುರಾಣಗಳಲ್ಲಿ ಮೂಲ ಶಕ್ತಿಯಿಂದ ಜನ್ಮಪಡೆಯುತ್ತಾರೆ. ಇವರ ಕಾರ್ಯ ಸೃಷ್ಟಿ, ಸ್ಥಿತಿ, ಲಯ, ಇವರಿಗೆ ಅನುಕ್ರಮವಾಗಿ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ ಯರು ಪತ್ನಿಯರು, ಇವರು ಪ್ರತಿನಿಧಿಸುವ ಮುಖ್ಯ ಗುಣಗಳು ವಿದ್ಯೆ, ಸಂಪತ್ತು ಹಾಗೂ ಶಕ್ತಿ ಮುಂದೆಲ್ಲಾ ಇವರಿಂದಲೇ ಸೃಷ್ಟಿಯ ಕಥೆ ಹೆಣೆಯಲ್ಪಡುತ್ತದೆ. ಹಾಗೂ ಸಂಸಾರ ಪರಿವಾರ ಬೆಳೆದು ಲೆಕ್ಕ ಇಲ್ಲದಷ್ಟು ದೇವ ತೇವತೆಗಳು ರೂಪುಗೊಳ್ಳುತ್ತಾ ಹೋಗುವುದು ನಮ್ಮ ಸಂಸ್ಕೃತಿಯ ಭಾಗ ಹಾಗೂ ಈಗಿನ ಗೊಂದಲದ ಮೂಲವಾಗಿದೆ.
ಈ ತ್ರಿಮೂರ್ತಿಗಳಲ್ಲಿ ವಿಷ್ಣು ಹಾಗೂ ಶಿವ ಇವರಿಗೆ ಅತಿ ಹೆಚ್ಚು ಮಹತ್ವ ಕೊಡಲಾಗಿದ್ದು ಎಲ್ಲೆಡೆ ದೇವಾಲಯ ಗಳು ಪೂಜೆ ಉತ್ಸವಗಳು ಇದ್ದು ಬ್ರಹ್ಮನನ್ನು ಕಡೆಗಣಿಸಲಾಗಿದೆ ಏಕೆ? ಎನ್ನುವ ಸಂಶಯಬರಬಹುದು ಮನುಷ್ಯನು ಯಾವಾಗಲೂ ಸ್ವಾರ್ಥಚಿಂತಕ ನಾಗಿದ್ದಾನೆ. ಹಿರಿಯರು ಎಷ್ಟೇ ಹೇಳಿದರೂ ಮನಸ್ಸು ತ್ಯಾಗದತ್ತ ಹೊರಳುವುದು ವಿರಳ. ನಮಗೆ ಉಪಯೋಗವಿಲ್ಲ ಎಂದು ತಿಳಿದರೆ ಅಂತಹವರನ್ನು ನಾವು ಅನಾದರ ಮಾಡುತ್ತೇವೆ ಅವರು ನಮಗೆ ಮಾಡಿದ ಉಪಕಾರವನ್ನು ಮರೆತು ಮುಂದೆ ಯಾರಿಂದ ಲಾಭ ಇದೆ ಅವರನ್ನು ಒಲೈಸುವುದು ನಮ್ಮ ಸಹಜ ಸ್ವಭಾವವಾಗಿದೆ. ಇದೇ ಗುಣ ಈ ದೇವರ ವಿಚಾರದಲ್ಲಿಯೂ ವ್ಯಕ್ತವಾಗಿದೆ ಎಂದು ತರ್ಕಿಸಿದರೆ ತಪ್ಪಾಗಲಾರದು. ಬ್ರಹ್ಮನ ಕೆಲಸ ಸೃಷ್ಟಿ ಅಂದರೆ ನಮ್ಮ ಜನ್ಮ ಆದಾಗಲೇ ಬ್ರಹ್ಮನ ಕೆಲಸ ಮುಗಿದಿದೆ. ನಮಗೆ ಬುದ್ದಿಬರುವಾಗ ನಾವು ಆಲೋಚಿಸುವುದು ಇನ್ನು ಬದುಕುವುದು ಹೇಗೆ ಹಾಗೂ ಸಾವಿನಿಂದ ತಪ್ಪಿಸಿಕೊಳ್ಳುವುದು ಹೇಗೆಂಬ ಚಿಂತೆ ಈ ಎರಡೂ ಕ್ರಿಯೆಯಲ್ಲಿಯೂ ಬ್ರಹ್ಮನ ಕೆಲಸ ಇಲ್ಲ ಆದುದರಿಂದ ಬ್ರಹ್ಮನನ್ನು ಮರೆತು ವಿಷ್ಣು ಹಾಗೂ ಶಿವರನ್ನು ಮೆಚ್ಚಿಸಲು ಓಲೈಸಲು ಮನುಷ್ಯ ಮುಂದಾಗಿದ್ದಾನೆ. ಇದಕ್ಕೆ ಪೂರಕವಾಗಿಯೇ ಮನುಷ್ಯನ ಅಪೇಕ್ಷೆಗೆ ತಕ್ಕಂತೆ ಹಿಂದು ಸಂಸ್ಕೃತಿಯ ವಿಕಸನವಾಗಿದೆ. ಸರ್ವಜಗತ್ತನ್ನು ಸೃಷ್ಟಿಸಿದವನು ಪರಮಾತ್ಮನಾದರೆ ಪರಮಾತ್ಮನ ಬಹುರೂಪಗಳನ್ನು ಸೃಷ್ಟಿಸಿದವರು ನಾವುಗಳೇ ಆಗಿದ್ದೇವೆ, ನಾವು ಮನುಷ್ಯರಾದ್ದರಿಂದ ದೇವರೂ ನಮ್ಮಂತೆಯೇ ಇರುತ್ತಾನೆಂದು ಅವನಿಗೆ ಮನುಷ್ಯನ ಆಕಾರ ಕೊಟ್ಟಿದ್ದೇವೆ. ಆತನು ಮನುಷ್ಯರಿಗಿಂತ ಅತಿಶಕ್ತಿಶಾಲಿ ಎಂದು ಬಿಂಬಿಸಲು ಆತನಿಗೆ ನಾಲ್ಕು ಕೈಗಳು ಇರುವಂತೆಯೂ ಬ್ರಹ್ಮನಿಗೆ ನಾಲ್ಕು ತಲೆ ಇರುವಂತೆಯೂ ಕಲ್ಪಿಸಿಕೊಂಡಿದ್ದೇವೆ. ಈಜನ್ಮದಲ್ಲಿ ಪುನಃ ಹುಟ್ಟುವ ಅವಕಾಶವಿಲ್ಲದುದರಿಂದ ಬ್ರಹ್ಮನ ದೇವಾಲಯಕ್ಕೆ ಪ್ರಾಮುಖ್ಯತೆ ಬಂದಿಲ್ಲ ಆದರೆ ವಿದ್ಯೆಬೇಕಿರುವುದರಿಂದ ಬ್ರಹ್ಮನ ಪತ್ನಿ ಸರಸ್ವತಿಯ ದೇವಾಲಯ ಎಲ್ಲಾಕಡೆಯೂ ಇದೆ. ಲಾಭ ಇದ್ದರೆ ಮಾತ್ರ ಪೂಜೆ ಅಲ್ಲವೇ? ಹಾಗೆಯೇ ಸಂಸ್ಕೃತಿ ಬೆಳೆದಂತೆ ಸಮಾಜದಲ್ಲಿ ಗುಂಪುಗಾರಿಕೆ ಆರಂಭವಾಯಿತು. ಇದರಿಂದಾಗಿ ವಿಷ್ಣುವಿನ ಆರಾಧಕರು, ಶೈವಾರಾಧಕರು ಎಂಬುದಾಗಿ ಎರಡು ಪಂಗಡ ವಾಗಿ ಅವರವರಲ್ಲಿ ತಾವು ಮೇಲು, ತಾವು ಮೇಲು ಎಂಬುದಾಗಿ ವಾಗ್ವಾದ ಆರಂಭವಾಯಿತು. ಆರಂಭದಲ್ಲಿ ಶಿವನ ಆರಾಧನೆ ಭಾರತದಾದ್ಯಂತ ಹೆಚ್ಚು ಪ್ರಚಲಿತದಲ್ಲಿತ್ತು ಪ್ರಾಚೀನ ದೇವಾಲಯಗಳೆಲ್ಲಾ ಶಿವಾಲಯಗಳೇ ಆಗಿರುವುದನ್ನು ನಾವು ನೋಡುತ್ತೇವೆ. ಕಾಶಿ ಗೋಕರ್ಣ ರಾಮೇಶ್ವರ ಮುಂತಾಗಿ ಪುರಾಣ ಕಥೆಗಳಲ್ಲಿ ಶಿವಾಲಯಗಳು ವರ್ಣಿಸಲ್ಪಟ್ಟಿವೆ. ಲಿಂಗಾರಾಧನೆ ಮೂರ್ತಿಗಳು ಸೃಷ್ಟಿಯಾಗುವ ಮೊದಲೇ ಇದ್ದಂತಹ ಆರಾಧನಾ ಪದ್ದತಿ. ಯಜ್ಞಯಾಗಾದಿಗಳ ನಂತರದ ಹಂತ ಲಿಂಗಾರಾಧನೆ. ಮುಂದೆ ವೈಷ್ಣವ ಪರಂಪರೆಗೆ ರಾಜಾಶ್ರಯ ಸಿಕ್ಕನಂತರ ಮೂರ್ತಿಗಳು ಹೆಚ್ಚು ಪ್ರಚಲಿತಕ್ಕೆ ಬಂದುವು. ಈ ಸಮಯದಲ್ಲಿ ಭಿನ್ನ ಭಿನ್ನ ದೈವಾರಾಧಕ ಪಂಗಡಗಳು ತಮ್ಮ ತಮ್ಮ ದೇವರನ್ನು ಶ್ರೇಷ್ಠ ಎಂದು ಸಾಧಿಸಲು ಪುರಾಣ ಗಳನ್ನು ಸೃಷ್ಟಿಸಿದರು, ಹೀಗೆ ಹದಿನೆಂಟು ಪುರಾಣಗಳು ಸೃಷ್ಟಿಯಾಗಿವೆ, ಹದಿನೆಂಟು ಉಪ ಪುರಾಣಗಳೂ ಇವೆ. ಇವುಗಳನ್ನೆಲ್ಲಾ ಮಹಾಭಾರತ ಬರೆದ ವೇದ ವ್ಯಾಸರೆ ಬರೆದಿದ್ದಾರೆ ಎನ್ನುತ್ತಾರೆ. ಆದರೆ ಇವುಗಳು ಆಯಾ ಗುಂಪುಗಳ ಪಂಡಿತರುಗಳಿಂದ ವ್ಯಾಸರ ಹೆಸರಿನಲ್ಲಿ ಬರೆಯಲ್ಪಟ್ಟಿವೆ ಎನ್ನಬಹುದು, ಎಲ್ಲಾಪುರಾಣಗಳೂ ಅಲ್ಲಿಯ ಕಥಾನಾಯಕನಿಂದಲೇ ವಿಶ್ವಸೃಷ್ಟಿ ಎಂದು ಪ್ರತಿಪಾದಿಸುತ್ತವೆ. ಹೀಗೆ ಗಾಣಪತ್ಯ, ಶಾಕ್ತ, ಕಾಪಾಲಿ, ಮುಂತಾದ ಪಂಗಡಗಳೂ ಹುಟ್ಟಿಕೊಂಡವು. ವೈಷ್ಣವರಿಂದ ಭಾಗವತ ಸೃಷ್ಟಿಯಾಗಿ ದಶಾವತಾರದ ಸೃಷ್ಟಿಯಾಯಿತು. ಉತ್ತಮ ಆದರ್ಶ ಬದುಕನ್ನು ಬದುಕಿ ದೈವತ್ವಕ್ಕೇರಿದ ಶ್ರೀರಾಮ, ಶ್ರೀಕೃಷ್ಣ ರನ್ನು ವಿಷ್ಣುವಿನ ಅವತಾರ ಎಂಬುದಾಗಿ ಪರಿಗಣಿಸಲಾಯಿತು. ಅವರ ಬದುಕಿನ ಆದರ್ಶಗಳೇ ಭಾರತೀಯ ಸಂಸ್ಕೃತಿಯ ಬೆಳವಣಿಗೆಗೆ ಮುಖ್ಯ ಆಧಾರವಾಗಿದೆ. ಮುಂದೆ ಬೌದ್ಧ ಮತ ಪ್ರಚಾರಕ್ಕೆ ಬಂದು ಸನಾತನ ಸಂಸ್ಕೃತಿ ವಿನಾಶದತ್ತ ಜಾರಲು ಆರಂಭವಾದಾಗ ಅಪಾಯವನ್ನು ಅರಿತ ಅಂದಿನ ಜ್ಞಾನಿಗಳು ಹಿಂದೂಗಳ ಏಕತೆಗಾಗಿ ಬುದ್ಧನನ್ನು ವಿಷ್ಣುವಿನ ಒಂಬತ್ತನೇ ಅವತಾರವೆಂಬುದಾಗಿ ಬಿಂಬಿಸಿ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ಇಂದಿಗೂ ದಶಾವತಾರದಲ್ಲಿ ಬೌದ್ಧಾವತಾರವನ್ನು ವೈಷ್ಣವರು ಎಲ್ಲಿಯೂ ವಿಷ್ಣುವಿಗೆ ಸರಿಸಮನಾಗಿ ಪರಿಗಣಿಸಿ ಪೂಜಿಸುವುದನ್ನು ನಾವು ನೋಡುವುದಿಲ್ಲ. ಇದೊಂದು Damage control ಉಪಕ್ರಮವೆಂಬುದಾಗಿ ನಾವು ಅರಿಯಬಹುದಾಗಿದೆ. ಪುರಾಣದ ಬುದ್ಧನೇ ಬೇರೆ ಎನ್ನುವವರಿದ್ದಾರೆ. ಆದರೆ ಕಥೆ ಯಾರಿಗೂ ಗೊತ್ತಿಲ್ಲ. ಹೀಗೆ ಕಾಲದ ಅಗತ್ಯದಂತೆ ಪುರಾಣಗಳು ಅವುಗಳ ಪಾತ್ರದಾರಿಗಳೂ ದೇವರು ದೇವತೆಗಳೆಂದು ಗರುತಿಸಲ್ಪಟ್ಟು, ವಿವಿಧ ವಿಗ್ರಹಗಳು ಗುಡಿಗಳು ಸ್ಥಾಪಿತವಾಗಿ ಪೂಜೆಗೊಳ್ಳಲಾರಂಭಿಸಿದವು. ಇದುವೇ ಬಹುದೇವತಾರಾಧನೆ ವಿಗ್ರಹಾರಾಧನೆಗೆ ಇವುಗಳಿಗೆಲ್ಲಾ ಕಾರಣ ವಾಯಿತು. ಇಲ್ಲೆಲ್ಲಾ ಪೂಜಿಸಲ್ಪಡುವ ರೂಪ ಹಾಗೂ ದೇವರುಗಳೆಲ್ಲಾ ಭಗವಂತನ ತತ್ವ ರೂಪಗಳಾಗಿದ್ದು ಒಂದೇ ಮೂಲವನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ಸ್ಪಷ್ಟವಾಗಿ ಅರಿಯಬೇಕು. ಹೇಗೆ ಮೂಲದಲ್ಲಿ ಹಾಲು – ಕೆನೆ, ಕೋವಾ, ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ, ಮುಂತಾಗಿ ವಿವಿಧ ರೂಪಗಳಲ್ಲಿ ವಿಭಿನ್ನ ರುಚಿಯನ್ನು ಗುಣವನ್ನು ಪ್ರದರ್ಶಿಸುತ್ತದೆಯೋ? ಅಂತೆಯೇ ಭಗವಂತನ ಹಲವು ರೂಪಗಳು ಹಲವು ಗುಣಗಳೆಂಬುದು ಗೊಂದಲವಿಲ್ಲದೆ ತಿಳಿಯಬೇಕಾದ ಸತ್ಯವಾಗಿದೆ. ಭಗವಂತನು ನಿರ್ಗುಣ ನಿರಾಕಾರ ಎಂದು ವೇದಗಳು ಹೇಳಿದ್ದರೂ ಅವನನ್ನು ವಿವಿಧಗುಣ ಆಕಾರಗಳಲ್ಲಿ ಪೂಜಿಸುವುದು ನಮ್ಮ ಕಲ್ಪನೆ ಹಾಗೂ ಸಂಸ್ಕೃತಿಯ ಭಾಗವಾಗಿದೆ. ಸಂಸ್ಕೃತಿಯೇ ಧರ್ಮದ ಜೀವಾಳವಾಗಿದೆ. ಇದು ಧರ್ಮದ ರಕ್ಷಣೆಗೆ ಅನಿವಾರ್ಯವೂ ಆಗಿದೆ. ದುರ್ಬಲ ಸಂಸ್ಕೃತಿಯ ನಾಗರೀಕತೆಗಳೆಲ್ಲವೂ ಅನ್ಯಮತೀಯ ದುರಾಕ್ರಮಿಗಳಾದ ಮತಾಂಧ ಅಸುರ ಪಂಥಗಳ ಆಕ್ರಮಣದಿಂದ ನಾಶವಾಗಿದ್ದರೆ! ಬಹುಸ್ತರದ ವಿಶಾಲ ಭಾರತೀಯ ಸಂಸ್ಕೃತಿ ಸಾವಿರ ವರಷಗಳ ಪರಕೀಯರ ಆಕ್ರಮಣದಿಂದಲೂ ಇಂದಿಗೂ ಜೀವಂತವಾಗಿರುವುದು ನಮ್ಮ ಹಿರಿಯರು ರೂಪಿಸಿದ ಇಂತಹ ಶ್ರೀಮಂತ ಸಂಸ್ಕೃತಿಯಿಂದಾಗಿಯೇ ಸಾಧ್ಯವಾಗಿದೆ, ನಮ್ಮ ಹಿರಿಯರು ನಿರ್ಮಿಸಿದ ಶ್ರೀಮಂತ ಸಂಸ್ಕೃತಿಯ ಬಗ್ಗೆ ನಾವು ಅಭಿಮಾನ ವನ್ನು ಹೊಂದ ಬೇಕು. ಹಾಗೂ ಈ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಅಜ್ಞಾನ ಅಂಧ ಶ್ರಧ್ಧೆಯನ್ನು ತೊರೆದು ಅಭಿಮಾನದಿಂದ ನಮ್ಮ ಸಂಸ್ಕೃತಿಯನ್ನು ರಕ್ಷಸಬೇಕಿದೆ. ನಮ್ಮ ಸಂಸ್ಕೃತಿಯ ನಾಶಕ್ಕೆ ಹೊರಟಿರುವ ಜಾತ್ಯಾತೀತ ಎಡಬಿಡಂಗಿ ರಾಜಕಾರಣವನ್ನು ದೇಶಮುಕ್ತ ಗೊಳಿಸಬೇಕಿದೆ. ಹಿಂದೂ ವಿರೋಧೀ ಗಂಜಿಗಿರಾಕಿ, ಬುದ್ದಿಜೀವಿಗಳನ್ನು, ಚಿತ್ರ ತಾರೆಯರನ್ನು, ದೃಶ್ಯ ಮಾಧ್ಯಮ ಹಾಗೂ ದಿನಪತ್ರಿಕೆ ಗಳನ್ನು ತಿರಸ್ಕರಿಸುವ ಮೂಲಕ ಮೂಲೆ ಸೇರಿಸಬೇಕಿದೆ. ಹಿಂದೂ ವಿರೋಧಿ ರಾಜಕೀಯ ಪಕ್ಷದಿಂದ ದೇಶವನ್ನು ಮುಕ್ತಮಾಡಬೇಕಿದೆ. ಮತಾಂತರ ಹಾಗೂ ಭಯೋತ್ಪಾದಕರ ಮತಗಳನ್ನು ಈ ನೆಲದಿಂದ ಹೊರಹಾಕಬೇಕಿದೆ. ಮತಾಂತರವಾದ ನಮ್ಮ ಸಹೋದರರನ್ನು ಪುನಃ ಬೆಳಕಿನ ದಾರಿಗೆ ತರಬೇಕಿದೆ ಹಾಗೂ ಶ್ರೀಮಂತ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಧರ್ಮರಾಜ್ಯವನ್ನು ಸ್ಥಾಪಿಸಬೇಕಿದೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವವರೆಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಇದಕ್ಕಾಗಿ ದೇವರ ಕೃಪೆಯಿಂದ ಮುಂದಡಿ ಇಡೋಣ. ಜೈ ಹಿಂದ್ ಜೈ ಭಾರತ ಮಾತಾ.
- ಶ್ರೀಜಿ
