ಹಿಂದೂ ಸಂಸ್ಕೃತಿಯ ಮೂಲಭೂತ ತಿಳುವಳಿಕೆ.
ಜಗತ್ತಿನ ಅತೀ ಪ್ರಾಚೀನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಅಗಾಧ ಜ್ಞಾನ ಭಂಡಾರದಿಂದ ಕೂಡಿದ ಶ್ರೀಮಂತ ಪರಂಪರೆಯ ಹಿಂದೂಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಸಾಮಾನ್ಯರಿಗೆ ಅತಿ ಕಷ್ಟವಾಗಿದೆ. ಋಷಿ ಮುನಿಗಳಿಂದ ನಿರ್ದೇಶಿಸಲ್ಪಟ್ಟು, ವೇದ ಉಪನಿಷತ್ತುಗಳಲ್ಲಿ ವಿವರಿಸಲ್ಲಪಟ್ಟು, ರಾಮಾಯಣ ಮಹಾ ಭಾರತಗಳಲ್ಲಿ ವರ್ಣಿಸಲ್ಲಟ್ಟ ಹಿಂದೂ ಪರಂಪರೆಯೇ ಭಾರತೀಯ ಸಂಸ್ಕೃತಿಯ ಜೀವಾಳ ವಾಗಿದೆ. ಹಿಂದೂ ಸಂಸ್ಕೃತಿಯು ನಿರಂತರವಾಗಿ ಋಷಿ ಮುನಿ ವಿದ್ವಾಂಸರುಗಳಿಂದ ಸಂಸ್ಕರಿಸಲ್ಲಪಡುತ್ತಾ, ಉತ್ತಮವಾದುದನ್ನು ಎಲ್ಲೆಡೆಯಿಂದಲೂ ತನ್ನತ್ತ ಸೆಳೆದು ಅಳವಡಿಸಿಕೊಳ್ಳುತ್ತಾ, ಇಡೀ ವಿಶ್ವಕ್ಕೆ ಜ್ಞಾನವನ್ನು ನೀಡಿದ ಶ್ರೀಮಂತ ಸಂಸ್ಕೃತಿಯ ಸನಾತನ ಪರಂಪರೆಯಾಗಿದೆ. ಹಿಂದುಗಳು ತಮ್ಮ ಸಂಸ್ಕೃತಿಯಲ್ಲಿನ ಕೆಲವು ಮೂಲ ಭೂತ ಅಂಶಗಳನ್ನು ತಿಳಿದುಕೊಳ್ಳುವಾಗ ಈ ಕೆಳಗಿನ ಅಂಶಗಳು ಮುಖ್ಯವಾಗಿವೆ. ಸಂಸ್ಕೃತಿಯಲ್ಲಿ ಎಲ್ಲವೂ ಈ ಮೂಲಅಂಶಗಳ ಸುತ್ತಲೇ ಬೆಳೆದು ಬಂದಿವೆ.
- ದೇವರ ಅಸ್ತಿತ್ವವನ್ನು ಒಪ್ಪುವುದು,
- ಪ್ರಕೃತಿ ಆರಾಧನೆ
- ಪುನರ್ಜನ್ಮದಲ್ಲಿ ನಂಬಿಕೆ
- ಕರ್ಮ ಸಿದ್ದಾಂತದಲ್ಲಿ ನಂಬಿಕೆ
- ಮೋಕ್ಷವೇ ಜೀವನದ ಪರಮ ಗುರಿ
1. ದೇವರ ಅಸ್ತಿತ್ವವನ್ನು ಒಪ್ಪುವುದು :- ಹಿಂದೂ ಸಂಸ್ಕೃತಿಯಲ್ಲಿ ಜಗದೊಡೆಯ ನೊಬ್ಬನಿದ್ದಾನೆ ಅವನು ಸೃಷ್ಟಿಕರ್ತ ನಾಗಿದ್ದಾನೆ ಅವನ ಅನುಗ್ರಹದಿಂದ ಜಗತ್ತು ರಕ್ಷಿಸಲ್ಪಟ್ಟಿದೆ ಅವನ ಅನುಗ್ರಹದಿಂದಾಗಿಯೇ ನಾವು ಜೀವಿಸುತ್ತಿದ್ದೇವೆಂಬುದಾಗಿ ನಂಬಲಾಗುವುದು. ಇಂತಹ ಜ್ಞಾನದ ಮೂಲ ವೇದಗಳಾಗಿವೆ. ಮಾನವ ಧರ್ಮದ ಮೂಲ ಆಧಾರ ಮನುಕುಲದ ಪ್ರಾಚೀನ ಸಾಹಿತ್ಯಗಳಾದ ವೇದ, ಉಪನಿಷತ್ತುಗಳಾಗಿವೆ. ಇವುಗಳ ಸಾರ ರೂಪವಾದ ಭಗವದ್ಗೀತೆ ಹಿಂದೂ ಧರ್ಮ ಗ್ರಂಥಗಳ ಸಾರ ರೂಪವಾಗಿದ್ದು ವಿಶ್ವದ ಧರ್ಮಗ್ರಂಥಗಳಲ್ಲಿ ಸಾರ್ವಕಾಲಿಕ ಶ್ರೇಷ್ಠತೆಯನ್ನು ಹೊಂದಿದೆ. ಭಗವದ್ಗೀತೆ ಮನಶಾಸ್ತ್ರ ಕೂಡಾ ಆಗಿದೆ. ಶ್ರೀ ರಾಮ ಹಾಗು ಶ್ರೀ ಕೃಷ್ಣರ ಚರಿತ್ರೆಗಳಾದ ರಾಮಾಯಣ ಹಾಗೂ ಮಹಾಭಾರತ ಮಹಾ ಕಾವ್ಯಗಳು ಭಾರತೀಯರ ಸಾಂಸ್ಕೃತಿಕ ವೈಭವದ ಜೀವಾಳವಾಗಿವೆ. ಪ್ರಾಚೀನ ಋಷಿ ಮುನಿಗಳೇ ಹಿಂದೂ ಸಂಸ್ಕೃತಿಯ ಶಿಲ್ಪಿಗಳಾಗಿದ್ದಾರೆ. ಮಧ್ಯಕಾಲದಲ್ಲಿ ಭಾರತದಲ್ಲಿ ಹಿಂದೂ ಧರ್ಮವು ಹಲವು ಕವಲುಗಳಲ್ಲಿ ವಿಘಟಿತಗೊಂಡು ಸಮಾಜವು ಗೊಂದಲದ ಅಂಧಕಾರದಲ್ಲಿದ್ದಾಗ ಸಮಾಜದ ಒಳಿತಿಗಾಗಿ ಶ್ರೀ ಶಂಕರಾಚಾರ್ಯರು ವೇದ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದು ಅದ್ವೈತ ತತ್ವವನ್ನು ಬೋಧಿಸಿ ಭಾರತದಲ್ಲಿ ತಾತ್ವಿಕವಾಗಿ ವಿಘಟಿತರಾದವರನ್ನು ಒಗ್ಗೂಡಿಸಿ ಹಿಂದೂಗಳನ್ನು, ಹಿಂದೂಸ್ತಾನವನ್ನು ಸಮಗ್ರವಾಗಿ ಒಂದುಗೂಡಿಸಿ ಬೆಸೆದು ಹಿಂದೂ ಧರ್ಮವು ಅಖಂಡಭಾರತದಲ್ಲಿ ಪುನರ್ವೈಭವ ಹೊಂದಲು ಕಾರಣರಾದರು. ಧರ್ಮ ರಕ್ಷಣೆಗಾಗಿ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಧರ್ಮಪೀಠಗಳನ್ನು ಸ್ಥಾಪಿಸಿ ತಮ್ಮ ನಾಲ್ಕು ಶಿಷ್ಯರನ್ನು ಅಲ್ಲಿ ಪ್ರತಿಷ್ಠಾಪಿಸಿ ನಾಲ್ಕು ವೇದಗಳ ರಕ್ಷಣೆಯ ಜವಾಭ್ಧಾರಿಯನ್ನು ಅವರಿಗೆ ನೀಡಿ ಹಿಂದೂ ಧರ್ಮವನ್ನು ಉದ್ದರಿಸಿದರು. ಈ ಮಠಗಳಿಂದಾಗಿಯೇ ಇಂದು ಅನೇಕ ಆಕ್ರಮಣ ಹಾಗೂ ಪರಕೀಯರ ದಾಳಿ ಹಾಗೂ ದುರ್ಮತಿಗಳ ದುರಾಡಳಿತಕ್ಕೊಳಗಾಗಿಯೂ ಹಿಂದೂಸ್ತಾನ ಹಿಂದೂಗಳದ್ದಾಗಿ ಉಳಿದಿದೆ. ಇಂತಹ ದೂರದೃಷ್ಟಿಯುಳ್ಳ ಮಹಾಪುರುಷರ ಮಾರ್ಗದರ್ಶನದಂತೆ ದೇವರು ಒಬ್ಬನೆ, ನಾಮಹಲವು ಎನ್ನುವ ತತ್ವ ಸಮಾಜದ ಎಲ್ಲರನ್ನೂ ಬೆಸೆಯುವಲ್ಲಿ ನೆರವಾಗಿದೆ, ಅಬೇಧ ಸಿದ್ದಾಂತವನ್ನು ಶಂಕರರು ಪ್ರತಿಪಾದಿಸಿದ್ದಾರೆ. ಸಂಸ್ಕಾರದಿಂದ ಶ್ರೇಷ್ಠತೆಯನ್ನು ಸದ್ಗತಿಯನ್ನು ಆತ್ಮವು ಹೊಂದುತ್ತದೆ ಎನ್ನುವುದು ಅದ್ವೈತದ ಮುಖ್ಯ ಪ್ರತಿಪಾದನೆಯಾಗಿದೆ. ಅಜ್ಞಾನದಿಂದ ಕೂಡಿದ ಆತ್ಮವು ಸುಜ್ಞಾನವನ್ನು ಹೊಂದಿದಾಗ ಕರ್ಮ ಬಂಧದಿಂದ ಬಿಡುಗಡೆಗೊಂಡು ಭಗವಂತನಲ್ಲಿ ಲೀನವಾಗುವುದೇ ಮೋಕ್ಷ ಎನ್ನುವುದು ಸರಳ ಅರ್ಥವಾಗಿದೆ. ಏಕಂ ಸತ್ ವಿಪ್ರಾಃ ಬಹುದಾ ವದಂತಿ ಎನ್ನುವುದು ದೇವರೊಬ್ಬನೇ ಎನ್ನುವುದನ್ನು ಸ್ಪಷ್ಟವಾಗಿ ಹೇಳುವ ಮಾತಾಗಿದೆ. ಒಬ್ಬನೇ ಭಗವಂತನ ಅನಂತ ಶಕ್ತಿಯನ್ನು ನಾವು ಹಲವು ಹೆಸರು ರೂಪಗಳಿಂದೆ ಪೂಜಿಸುತ್ತೇವೆ.
ಮುಂದೆ ಮಧ್ವಾಚಾರ್ಯರು ಇದಕ್ಕೆ ವಿರುದ್ಧವಾದ ದ್ವೈತ ಎಂಬ ತಾರತಮ್ಯ ಸಿದ್ದಾಂತವನ್ನು ಪ್ರಚಾರಮಾಡಿದ್ದಾರೆ. ಇವರು ಹಲವು ದೇವರ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೆ. ಈ ಭೇದ ಪ್ರತಿಪಾದನೆಯು ಸಮಾಜದ ವಿಘಟನೆಗೆ ಎಡೆಮಾಡಿ ಕೊಡುವುದರಿಂದಲೂ ಹಾಗೂ ಜನರ ಮಧ್ಯೆ ಪರಸ್ಪರರಲ್ಲಿ ಮೇಲು ಕೀಳೆಂಬ ಮನಸ್ತಾಪಕ್ಕೆ ಕಾರಣವಾಗಿ ವಿವಾದಗಳಿಗೆಡೆ ಮಾಡಿಕೊಡುವುದರಿಂದಲೂ ಸಮಾಜದಲ್ಲಿನ ಬಹುಸಂಖ್ಯೆಯ ಜನರಲ್ಲಿ ಪ್ರಸಿದ್ಧಿಯನ್ನು ಪಡೆಯುವಲ್ಲಿ ವಿಫಲವಾಗಿದೆ. ಹಾಗೂ ಇದನ್ನು ಸಾರ್ವತ್ರಿಕವಾಗಿ ಸಮಾಜ ಸ್ವೀಕರಿಸುವುದು ಅಸಾಧ್ಯವಾಗಿದೆ. ತಾರತಮ್ಯ ಸಿದ್ಧಾಂತವು ವಿದ್ವಜ್ಜನರ ಮಧ್ಯೆ ತಾತ್ವಿಕ ನೆಲೆಯಲ್ಲಿ ಚರ್ಚೆಗೆ ಸೂಕ್ತ ವಿಷಯ ವಾಗಬಹುದಾದರೂ ಸಾಮಾನ್ಯಜನರಲ್ಲಿ ಸರ್ವಾನುಕರಣೆಗೆ ಹಿನ್ನೆಡೆಯನ್ನು ಒದಗಿಸುವಂತಿದೆ, ಆದರೂ ಸಾರಸ್ವತ ಲೋಕದಲ್ಲಿ ಇದು ದ್ವೈತ ಸಿದ್ದಾಂತವೆಂದು ಪ್ರಸಿದ್ಧವಾಗಿದೆ. ನಾವೆಲ್ಲಾ ಒಂದು ನಾವೆಲ್ಲ ಹಿಂದು ಎನ್ನುವುದೇ ಇಂದು ನಮ್ಮ ಅಸ್ತಿತ್ವಕ್ಕೆ ಅನಿವಾರ್ಯವಾದ ಸಿದ್ಧಾಂತ ವಾಗಿದ್ದು ನಾವೆಲ್ಲಾ ಆ ನೆಲೆಯಲ್ಲಿ ಮತ ಭೇದದ ತಾರತಮ್ಯವನ್ನು ಅಳಿಸಿ ಸಮಾಜವನ್ನು ಒಗ್ಗೂಡಿಸಬೇಕಿದೆ. ಭೇದಸಿದ್ಧಾಂತದಿಂದ ಸಮಾಜ ಹಾಗೂ ದೇಶವು ದುರ್ಬಲಗೊಳ್ಳದಿರಲಿ. ವಿಶಾಲ ಮನಸ್ಸಿನಿಂದ ಸಾಮರಸ್ಯ ಹಾಗೂ ಏಕತೆಯತ್ತ ಮಾರ್ಗದರ್ಶನ ಕೊಡುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಲಿ ಶಾಂತಿ ಸಾಮರಸ್ಯ ನೆಲೆಯಾಗಲಿ. ಎನ್ನುವುದೇ ನಮ್ಮ ಅಪೇಕ್ಷೆಯಾಗಿದೆ. ಹಿಂದುಸಂಸ್ಕೃತಿಯಲ್ಲಿ ದೇವರನ್ನು ನಂಬುವುದು ಹಾಗೂ ಪೂಜಿಸುವುದು ಒಂದು ಮುಖ್ಯವಾದ ಕ್ರಿಯೆಯಾಗಿದೆ.
ಪ್ರಕೃತಿ ಆರಾಧನೆ ಹಿಂದೂ ಸಂಸ್ಕೃತಿಯ ಮೂಲಭೂತವಾದ ಅಡಿಪಾಯವಾಗಿದೆ ಪಂಚಭೂತಗಳಿಂದ ಸೃಷ್ಟಿ ಹಾಗೂ ಅವುಗಳ ವಿಸ್ಥಾರ ರೂಪವೇ ಪ್ರಕೃತಿಯಾಗಿದೆ ಇವುಗಳ ಸೃಷ್ಟಿಕರ್ತನೇ ಪರಮಾತ್ಮನಾಗಿದ್ದು ಪರಮಾತ್ಮನ ಭೌತಿಕ ರೂಪವೇ ಸೃಷ್ಟಿಯಾಗಿದೆ. ಪರಮಾತ್ಮನು ಸರ್ವತ್ರ ಇದ್ದಾನೆ ಎನ್ನುವುದು ಹಿಂದೂಗಳ ಅಛಲನಂಬಿಕೆ ಅಂದರೆ ಇಡೀಸೃಷ್ಟಿ ಭಗವಂತನ ಅಸ್ಥಿತ್ವವನ್ನು ಹೊಂದಿದೆ, ಅಂದರೆ ಸಮಸ್ತ ಸೃಷ್ಟಿಯೇ ಭಗವಂತನ ದೇಹ ಎನ್ನಬಹುದು. ಭಗವಂತ ಈ ಸೃಷ್ಟಿಯ ಆತ್ಮ ನಾಗಿದ್ದಾನೆ. ಬಹುದೇವತಾರಾಧನೆ ನಮ್ಮ ಸಂಸ್ಕೃತಿಯಾಗಿ ಬೆಳೆದು ಬಂದಿದೆ. ವಿಗ್ರಹಾರಾಧನೆ ಸಂಸ್ಕೃತಿಯ ಭಾಗವಾಗಿದೆ, ಹಲವು ದೇವರಿದ್ದಾರೆ ಅವರಲ್ಲಿ ಮೇಲು ಕೀಳು ಹೆಚ್ಚು ಕಡಿಮೆ ಇದೆ ಎಂದು ನಂಬುವುದು ಉಚಿತ ತಿಳುವಳಿಕೆ ಅಲ್ಲ ಎನ್ನಬಹುದು, ದೇವರ ಹಲವು ರೂಪಗಳು ಹಲವು ಶಕ್ತಿಗಳು ಹಲವು ಅವತಾರಗಳು ನಾವು ಕಲ್ಪಿಸಿಕೊಂಡ ಒಂದೇ ಭಗವಂತನ ಒಂದೇ ಮೂಲಶಕ್ತಿಯ ವಿವಿಧ ರೂಪಗಳಾಗಿವೆಯೇ ಹೊರತು ವಿವಿಧ ವಿಭಿನ್ನ ದೇವರುಗಳೆನ್ನುವುದು ಉಚಿತವಲ್ಲ. ಇದನ್ನೇ ಅದ್ವೈತ ತತ್ವ ಸಾರುತ್ತದೆ. ಜ್ಞಾನದ ಸಾರವನ್ನು ನಮ್ಮ ಹಿರಿಯರು ಪುರಾಣ ಕಥೆಗಳ ರೂಪದಲ್ಲಿ ನಮಗೆ ತಿಳಿಸಿದ್ದಾರೆ. ಇಂತಹ ಪುರಾಣಗಳ ಪಾತ್ರಧಾರಿಗಳನ್ನು ನಾವು ದೇವರೆಂದು ಪೂಜಿಸಿಕೊಂಡು ಬಂದಿದ್ದೇವೆ, ಸರ್ವದೇವ ನಮಸ್ಕಾರಃ ಕೇಶವಂಪ್ರತಿ ಗಚ್ಛತಿ ಎನ್ನುವುದು ಅತ್ಯಂತ ಉಚಿತವಾದ ಮಾತು ಇದನ್ನು ನಾವು ಶ್ರದ್ಧೆ ಹಾಗೂ ನಂಬಿಕೆಯಿಂದ ಪಾಲಿಸುವುದು ಗೊಂದಲ ರಹಿತ ನಿರ್ಧಾರಕ್ಕೆ ಉಚಿತವಾದುದಾಗಿದೆ.
2. ಪ್ರಕೃತಿ ಆರಾಧನೆ :- ಶಕ್ತಿಯು ಭಗವಂತನ ಸೂಕ್ಷ್ಮರೂಪವಾಗಿದ್ದರೆ ಸೃಷ್ಟಿಯನ್ನು ಭಗವಂತನ ಸ್ಥೂಲ ರೂಪವೆನ್ನಬಹುದು. ಹಿಂದೂಗಳು ನಿರಾಕಾರನಾದ ದೇವರನ್ನು ಪಂಚಭೂತಗಳಲ್ಲಿ ಗುರುತಿಸಿ ಪ್ರಕೃತಿಯ ರೂಪದಲ್ಲಿ ಕಂಡು ಅದನ್ನು ಆರಾಧಿಸಿಕೊಂಡು ಪೂಜಿಸಿಕೊಂಡು ರಕ್ಷಿಸಿಕೊಂಡು ಗೌರವಿಸಿಕೊಂಡು ಬಂದಿದ್ದಾರೆ. ಇದು ಹಿಂದೂ ಸಂಸ್ಕೃತಿಯ ಮುಖ್ಯ ಲಕ್ಷಣಗಳಲ್ಲೊಂದಾಗಿದೆ. ಸೃಷ್ಟಿ ಪಂಚಭೂತಗಳಿಂದಾಗಿದೆ. ಅಗ್ನಿ, ವಾಯು, ಜಲ, ಮಣ್ಣು ಹಾಗೂ ಆಕಾಶ ಇವುಗಳೇ ಪರಮಾತ್ಮನ ಸ್ಥೂಲ ರೂಪವೆಂದು ಪರಿಗಣಿಸಿ ಪ್ರಕೃತಿಯನ್ನು ಪೂಜಿಸಿಕೊಂಡು ಬರಲಾಗಿದೆ. ಇದುವೇ ಹಿಂದೂಗಳ ಸಂಸ್ಕೃತಿಯ ಮೂಲ ಆಧಾರವಾಗಿದೆ. ಹೋಮ, ಹವನ, ಯಜ್ಞ, ಯಾಗ, ಭೂಮಿಪೂಜೆ, ನದಿಗಳ ಪೂಜೆ, ಪ್ರಾಣಿ, ಪಕ್ಷಿ, ಮರ ಇವೆಲ್ಲವುಗಳಲ್ಲೂ ಭಗವಂತನ ಅಸ್ತಿತ್ವವನ್ನು ಕಂಡು ಪೂಜಿಸುವುದು ಹಿಂದುಗಳ ಜೀವನ ಸಂಸ್ಕೃತಿಯ ಅವಿನಾಭಾವ ಅಂಗವಾಗಿದೆ. ಹಿಂದೂಗಳ ದೇವರ ಪೂಜೆ ಪ್ರಕೃತಿ ಪೂಜೆಯೇ ಆಗಿದೆ ಇಂದು ಇದು ವಿಕಾರವಾಗಿರುವುದು ಸಮಾಜದ ದುರಂತ ವಾಗಿದೆ. ನಾವು ಇಂದು ಪ್ರಕೃತಿಯಸೇವೆಯನ್ನು ಮಾಡುವುದೇ ನಮ್ಮ ಸಂಸ್ಕೃತಿಯನ್ನು ಉಳಿಸುವ ಹಾಗೂ ಮುಂದಿನ ಮನುಕುಲವನ್ನು ಉಳಿಸುವ ದೇವರ ಪೂಜೆಯಾಗಿದೆ. ಸೃಷ್ಟಿಕರ್ತನೂ ಕೂಡಾ ತನ್ನ ಸೃಷ್ಟಿಯನ್ನು ಸುಂದರಗೊಳಿಸುವವನನ್ನೇ ತನ್ನ ಭಕ್ತನೆಂದು ಅನುಗ್ರಹಿಸುತ್ತಾನೆಯೇ ಹೊರತು ತನ್ನ ಸೃಷ್ಟಿಯನ್ನು ಕಲುಷಿತಗೊಳಿಸುವವನನ್ನಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.
- ಪುನರ್ಜನ್ಮದಲ್ಲಿ ನಂಬಿಕೆ:
ಹಿಂದೂಗಳು ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದಾರೆ. ದೇಹ ಜಡ ಹಾಗೂ ಅಶಾಶ್ವತ ಆದರೆ ಜೀವ ಅಮರ ಚೇತನ ಇದು ಶಾಶ್ವತ. ಇದು ಹಿಂದೂಗಳ ನಂಬಿಕೆ ಹಾಗೂ ಸಿದ್ಧಾಂತ ವಾಗಿದೆ. ದೇಹಕ್ಕೆ ಸಾವಿದೆ ಆದರೆ ಜೀವಕ್ಕೆ ಸಾವಿಲ್ಲ ಜೀವ ದೇಹ ದಿಂದ ದೇಹಕ್ಕೆ ಸಂಚರಿಸುತ್ತಿರುತ್ತದೆ ಒಂದು ದೇಹವನ್ನು ತೊರೆದ ಜೀವ ಇನ್ನೊಂದು ದೇಹದಲ್ಲಿ ಪುನಃ ಆಶ್ರಯ ಪಡೆಯುತ್ತದೆ ಇದುವೇ ಪುನರ್ಜನ್ಮ ಎನ್ನುವ ಹಿಂದುಗಳ ನಂಬಿಕೆಯಾಗಿದೆ, ಪುನರಪಿ ಜನನಂ ಪುನರಪಿನ ಮರಣಂ ಎನ್ನುವುದು ಆತ್ಮದ ಅವಿನಾಶಿ ತತ್ವವನ್ನು ತಿಳಿಸುತ್ತದೆ. ಆತ್ಮವು ಭಗವದ್ ಶಕ್ತಿಯಲ್ಲಿ ಲೀನವಾಗಿ ಜನನ ಮರಣಗಳ ಚಕ್ರದಿಂದ ಬಿಡುಗಡೆ ಹೊಂದುವುದೇ ಮೋಕ್ಷವಾಗಿದೆ.
- ಕರ್ಮ ಸಿದ್ದಾಂತ :
ಹಿಂದೂ ಧರ್ಮದ ನಂಬಿಕೆಯಂತೆ ಕರ್ಮ ಸಿದ್ದಾಂತವೇ ಮನುಷ್ಯನ ಪುನರ್ಜನ್ಮಕ್ಕೆ ಕಾರಣ ಆಗಿದೆ. ಹುಟ್ಟಿದ ಮನುಷ್ಯ ಉತ್ತಮ ಹಾಗೂ ಕೆಟ್ಟ ಕರ್ಮ ಗಳನ್ನು ಮಾಡುತ್ತಾನೆ. ಇದರ ಪ್ರತಿಫಲವನ್ನು ಆತನು ಅನುಭವಿಸಲೇ ಬೇಕು ಎನ್ನುವುದು ಕರ್ಮ ಸಿದ್ದಾಂತ. ಉತ್ತಮ ಕೆಲಸದಿಂದ ಪೂಣ್ಯವೂ ಕೆಟ್ಟ ಕೆಲಸದಿಂದ ಪಾಪವೂ ಸಂಗ್ರಹ ವಾಗುವುದು. ಇಂತಹ ಪುಣ್ಯ ಹಾಗೂ ಪಾಪಗಳಿಗೆ ಸುಖ ಹಾಗೂ ದುಃಖ ವನ್ನು ಅನುಭವಿಸಬೇಕು ಇದನ್ನು ಪ್ರಸ್ತುತ ಜನ್ಮದಲ್ಲಿ ಅನುಭವಿಸಬೇಕು ಇಲ್ಲವಾದಲ್ಲಿ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುವುದು. ಇದುವೇ ಕರ್ಮ ಸಿದ್ದಾಂತ, ಕೆಲವರು ಹುಟ್ಟುವಾಗಲೇ ಸುಖದ ಸುಪ್ಪತ್ತಿಗೆ ಯಲ್ಲಿ ಹುಟ್ಟುತ್ತಾರೆ. ಕೆಲವರು ಅಂಗವಿಕಲರಾಗಿಯೂ, ಕಡು ಬಡವರಾಗಿಯೂ ಹುಟ್ಟಿರುತ್ತಾರೆ ಇದು ಏಕೆ? ಇದಕ್ಕೆ ಅವರ ಪೂರ್ವಜನ್ಮದ ಕರ್ಮ ಫಲವೇ ಕಾರಣವಾಗಿರುವುದು, ಈ ಜನ್ಮದ ನಮ್ಮ ಸತ್ಕರ್ಮದ ಫಲ ಮುಂದಿನ ದಿನ ಅಥವಾ ಜನ್ಮದಲ್ಲಿ ನಮ್ಮನ್ನು ಕಾಪಾಡುವುದು ಇದುವೇ ಕರ್ಮ ಫಲ ಸಿದ್ದಾಂತ. ಇದನ್ನೇ ಧರ್ಮೋರಕ್ಷತಿ ರಕ್ಷಿತಃ ಎಂದಿರುವುದು. ಈ ಕರ್ಮಫಲ ಸಿದ್ಧಾಂತವನ್ನು ಹಿಂದೂಗಳು ನಂಬುತ್ತಾರೆ. ಇಂತಹ ನಂಬಿಕೆಯೇ ಬದುಕಿನಲ್ಲಿ ಸತ್ಕರ್ಮಮಾಡಲು ಮನುಷ್ಯನನ್ನು ಪ್ರೇರೇಪಿಸುತ್ತದೆ.
- ಮೋಕ್ಷವೇ ಜೀವನದ ಪರಮ ಗುರಿ:
ಒಬ್ಬ ಹಿಂದುವಿನ ಬದುಕಿನ ಅಂತಿಮ ಗುರಿ ಮೋಕ್ಷವಾಗಿರುವುದು. ಹಿಂದೂ ಸಂಸ್ಕೃತಿಯ ಇನ್ನೊಂದು ಮುಖ್ಯ ಉದ್ದೇಶ ಅಥವಾ ನಂಬಿಕೆ ಮೋಕ್ಷವಾಗಿದೆ ಮೋಕ್ಷ ಎಂದರೆ ಬಿಡುಗಡೆ ಎಂದು ಅರ್ಥ ಜೀವವು ಕರ್ಮ ಬಂಧಗಳಿಂದಾಗಿ ಜೀವನಚಕ್ರದಲ್ಲಿ ಜನನ ಮರಣಗಳ ನಿರಂತರತೆಗೆ ಒಳಗಾಗುವುದು. ಇಂತಹ ಹುಟ್ಟು ಸಾವುಗಳ ಬಂಧದಿಂದ ಬಿಡಗಡೆಯೇ ಮುಕ್ತಿ ಅಥವಾ ಮೋಕ್ಷ ಎಂಬುದಾಗಿದೆ. ಮನುಷ್ಯನು ಪುಣ್ಯ ಸಂಪಾದನೆ ಮಾಡಿದಾಗ ಅದರ ಫಲ ಸ್ವರೂಪವಾದ ಸುಖವನ್ನು ಅನುಭವಿಸುವುದಕ್ಕಾಗಿ ಹುಟ್ಟುವುದು ಅನಿವಾರ್ಯವಾಗಿದೆ ಹಾಗೆಯೇ ಪಾಪ ಸಂಚಯನದಲ್ಲಿಯೂ ಪಾಪದ ಫಲಸ್ವರೂಪವಾದ ಕಷ್ಟಗಳನ್ನು ಅನುಭವಿಸಲು ಹುಟ್ಟುವುದು ಅನಿವಾರ್ಯವಾಗಿದೆ. ಹೀಗೆ ಪಾಪಪುಣ್ಯಗಳಲ್ಲಿನ ವ್ಯತ್ಯಾಸವು ಪುನರ್ಜನ್ಮಕ್ಕೆ ಕಾರಣವಾಗಿದೆ. ಆದರೆ ಪಾಪ ಪುಣ್ಯ ರಹಿತ ಸ್ಥಿತಿಯಲ್ಲಿ ಮನುಷ್ಯನು ದೇಹತೊರೆದಾಗ ಮೋಕ್ಷವನ್ನು ಹೊಂದುವನು ಇಲ್ಲವೇ ಭಗವಂತನಲ್ಲಿ ಲೀನನಾಗುವನು ಅಥವಾ ಭಗವಂತನ ಸಾಮೀಪ್ಯವನ್ನು ಹೊಂದುವನು ಎನ್ನುವುದು ಮೋಕ್ಷದ ಅರ್ಥವಾಗಿದೆ. ಹೀಗೆ ಪಾಪಪುಣ್ಯ ರಹಿತವಾಗಿ ದೇಹಮುಕ್ತನಾದ ಆತ್ಮನಿಗೆ ಪುನರ್ಜನ್ಮ ಇರುವುದಿಲ್ಲ. ಇಂತಹ ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆಯನ್ನು ಹೊಂದಲು ನಿಷ್ಕಾಮ ಕರ್ಮವನ್ನು ಮಾಡಬೇಕು. ಮಾಡುವ ಕೆಲಸವನ್ನು ಭಗವತ್ಕಾರ್ಯ ಎಂಬುದಾಗಿ ಫಲಾಪೇಕ್ಷೆ ಇಲ್ಲದೆ ಕರ್ತವ್ಯದೃಷ್ಟಿಯಿಂದ ಮಾಡಿದಾಗ ಅಂತಹ ಕಾರ್ಯವು ಪಾಪ ಪುಣ್ಯದಿಂದ ವಿಮುಖವಾಗಿದ್ದು ಮೋಕ್ಷಕ್ಕೆ ಮಾರ್ಗವಾಗುವುದೆಂಬುದು ಹಿಂದುಗಳ ನಂಬಿಕೆ. ಇದನ್ನೇ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ ಎಂಬುದಾಗಿ ಹೇಳಿದ್ದಾನೆ. ದೇಹಾಭಿಮಾನವನ್ನು ತೊರೆದು ಬಗವಂತನ ಚಿಂತನೆಯಲ್ಲಿ ಅವನನ್ನೇ ಹೊಂದಬೇಕೆಂಬ ಉತ್ಕಟ ಇಚ್ಛೆಯಲ್ಲಿ ಜೀವನವನ್ನು ಕೊನೆಗಾಣಿಸುವುದೇ ಮೋಕ್ಷದ ಸಾಧನೆಯ ಹಾದಿ ಎನ್ನುವುದಾಗಿ ಹೇಳಲಾಗಿದೆ ಇದಕ್ಕೆ ಹಲವು ಮಾರ್ಗಗಳಿವೆ. ವಿದೇಶೀ ಮೂಲದ ಅನ್ಯಮತಗಳಲ್ಲಿ ಮೋಕ್ಷಚಿಂತನೆ ಇಲ್ಲದೆ ಭೋಗಚಿಂತನೆಗೆ ಪ್ರಾಧಾನ್ಯತೆ ನೀಡಿರುವುದರಿಂದ ಅನ್ಯಾಯ ಅಕ್ರಮ ಕ್ರೌರ್ಯ ಅಶ್ಲೀಲತೆ ಇಂದ್ರಿಯ ಸುಖ ಇವೇ ಪ್ರದಾನವಾಗಿ ಸ್ಥಾನಪಡೆದಿದ್ದು. ಇದುವೇ ಅಸಹನೆಗೆ ಕಾರಣ ವಾಗಿದೆ.
ಹೀಗೆ ದೇವರ ಅಸ್ತಿತ್ವವನ್ನು ಒಪ್ಪುವುದು, ಪ್ರಕೃತಿಯನ್ನು ಪೂಜಿಸುವುದು, ಪುನರ್ಜನ್ಮದಲ್ಲಿ ನಂಬಿಕೆ, ಕರ್ಮ ಸಿದ್ದಾಂತ ಹಾಗೂ ಮೋಕ್ಷ ಚಿಂತನೆ ಇವು ಹಿಂದೂ ಧರ್ಮದ ಮೂಲ ಭೂತ ತಿಳುವಳಿಕೆಗಳಾಗಿವೆ. ಹಿಂದೂ ಸಂಸ್ಕೃತಿಯ ಎಲ್ಲಾ ಆಚಾರ ವಿಚಾರಗಳೂ ಈ ಅಂಶಗಳಸುತ್ತಲೇ ಬೆಳೆದು ಬಂದಿದೆ.
-ಶ್ರೀಜಿ
ಜೈ ಹಿಂದ್ ಜೈ ಶ್ರೀರಾಮ್
Comments are closed.