ನಮ್ಮ ಪುರಾಣಕಥೆಗಳೆಲ್ಲಾ ನಡೆದ ಘಟನೆಗಳೇ ? ಅಥವಾ ಕಾಲ್ಪನಿಕ ಕಥೆಗಳೇ?

ನಮ್ಮ ಋಷಿಮುನಿಗಳು ವೇದ ಉಪನಿಷತ್ತಿನ ಮೌಲ್ಯಗಳನ್ನು ಧರ್ಮ ಸೂಕ್ಷ್ಮಗಳನ್ನು ಸಾಮಾನ್ಯ ಜನರಿಗೆ ಅರ್ಥವಅಗುವಂತೆ ತಿಳಿಸಲು ಪುರಾಣಗಳನ್ನು ರಚಿಸಿದರು. ಶಾಸ್ತ್ರಾಭ್ಯಾಸಮಾಡದ ಶ್ರಮಜೀವನದಲ್ಲಿ ತೊಡಗಿಸಿಕೊಂಡ ಸಮಾಜದ ಬಹುಸಂಖ್ಯಾತ ಸಾಮಾನ್ಯ ಪ್ರಜಾಜನರಿಗೆ ಧರ್ಮವನ್ನು ಅನುಸರಿಸಲು ಸುಲಭವಾಗಿ ತಿಳಿಸುವ ಉದ್ದೇಶದಿಂದ ಪುರಾಣಗಳು ರಚಿತವಾಗಿವೆ. ಅಂದಿನ ಕಾಲಘಟ್ಟದಲ್ಲಿ ನಡೆದ ಕೆಲವು ಘಟನೆಗಳನ್ನು ಮಾದರಿಯಾಗಿಟ್ಟುಕೊಂಡು ಹಾಗೂ ಅದಕ್ಕೆ ಪೂರಕವಾಗಿ ಅಗತ್ಯವಾದ ಪಾತ್ರಧಾರಿಗಳನ್ನು ಸೃಷ್ಟಿಸಿ, ನೀತಿ ಪ್ರಧಾನ ವಾಗಿಯೂ ರೋಚಕವಾಗಿಯೂ, ರಂಜನೀಯವಾಗಿಯೂ, ಜನಸಾಮಾನ್ಯರ ನೆನಪಲ್ಲಿ ಉಳಿಯುವಂತೆಯೂ, ರೂಪಿಸಿದ ರಮಣೀಯ ಕಥಾನಕಗಳೇ ಪುರಾಣಗಳು ಎನ್ನಬಹುದು. ಪುರಾಣಗಳಲ್ಲಿ ಬರುವ ಹಲವಾರು ಘಟನೆಗಳು ಹಲವಾರು ಸನ್ನಿವೇಶಗಳು ಅಂದಿನ ಕಾಲಘಟ್ಟದಲ್ಲಿ ನಡೆದಿರಬಹುದು. ಅವುಗಳನ್ನೇ ಪಾತ್ರಗಳ ಸೃಷ್ಟಿಗೆ ಆಧಾರ ವಾಗಿಟ್ಟುಕೊಂಡಿರಬಹುದು. ಆದುದರಿಂದ ನಾವು ಪುರಾಣಗಳು ಹೇಳುವ ತತ್ವಕ್ಕೆ ಮಹತ್ವಕೊಡಬಹುದೇ ಹೊರತು ಪಾತ್ರಕ್ಕೆ ಅಥವಾ ಘಟನೆಗಳ ಸತ್ಯಾಸತ್ಯತೆಗೆ ಮಹತ್ವಕೊಡುವುದು ಸೂಕ್ತವಲ್ಲ. ಅವುಗಳಲ್ಲಿ ವಿವರಿಸುವ ಘಟನೆಗಳಿಂದ ಅಂದಿನ ಸಾಮಾಜಿಕ ಸ್ಥಿತಿಗತಿ, ರೀತಿ ರಿವಾಜುಗಳನ್ನು ಅರಿಯಲು ಪ್ರಯತ್ನಿಸಬಹುದು. ಕೆಲವು ಅತೀಂದ್ರಿವಿಷಯಗಳನ್ನು ಕಾಲ್ಪನಿಕ ಎಂದೂ ಒಪ್ಪಬಹುದು. ಹದಿನೆಂಟು ಪುರಾಣಗಳನ್ನೂ ವ್ಯಾಸರೇ ರಚಿಸಿದ್ದಾರೆ ಎನ್ನುವುದನ್ನು ಇತಿಹಾಸಕಾರರು ಸಂಪೂರ್ಣವಾಗಿ ಒಪ್ಪುವುದಿಲ್ಲ. ಅಲ್ಲದೆ ಇತಿಹಾಸದಲ್ಲಿ ಇಪ್ಪತ್ತೆಂಟು ವ್ಯಾಸರ ಉಲ್ಲೇಖವಿದೆ ವ್ಯಾಸ ಎನ್ನುವುದು ಹೆಸರಲ್ಲ ಅದೊಂದು ಪದವಿ. ಇಂದ್ರ ಎನ್ನುವುದೂ ಕೂಡಾ ಒಂದು ಪದವಿ. ಮಹಾಭಾರತ ರಚಿಸಿದ ಸತ್ಯವತಿಯ ಮಗನಾದ ವೇದವ್ಯಾಸರ ನಿಜ ಹೆಸರು ಕೃಷ್ಣದ್ವೈಪಾಯನ ಎಂಬುದಾಗಿ.  ಹಲವು ವ್ಯಾಸರಲ್ಲಿ ಯಾವ ವ್ಯಾಸರು ಅಥವಾ ಎಷ್ಟುಜನ ವ್ಯಾಸರಿಂದ ಪುರಾಣಗಳು ರಚಿತವಾಗಿದೆ ಅಥವಾ ವ್ಯಾಸರ ಹೆಸರಿನಲ್ಲಿ ಕೆಲವು ಜನ ತಾವೇ ಪುರಾಣಗಳನ್ನು ಬರೆದು ಪ್ರಚಾರಕ್ಕಾಗಿ ವ್ಯಾಸರ ಹೆಸರನ್ನು ನೀಡಿದ್ದಾರೋ ಎ್ನನುವ ಎಲ್ಲಾ ಗೊಂದಲಗಳಿಗೆ ಉತ್ತರ ಹುಡುಕುವುದು ಕಷ್ಟ. ವ್ಯಾಸ, ಇಂದ್ರ ಮುಂತಾದುವು ಒಂದು ಪದವಿ ಎನ್ನುವುದು ಹಲವು ಪಂಡಿತರ ಅಭಿಪ್ರಾಯ. ಇಂತಹ ಪದವಿಯಲ್ಲಿ ಕಾಲಕ್ರಮದಲ್ಲಿ ಅನೇಕರು ಬಂದು ಹೋಗಿದ್ದು ಎಲ್ಲರನ್ನೂ ಪದವಿಹೆಸರಿನಲ್ಲಿ ಕರೆದು ಅವರ ರಚನೆಗಳು ಪದವಿಯಿಂದ ಗುರುತಿಸಲ್ಪಟ್ಟಿದ್ದರೆ. ಆಗವೂ ಹಲವು ಜನ ವ್ಯಾಸರು ಪುರಾಣಗಳನ್ನು ರಚಿಸಿರುವ ಸಂಭವ ಒಪ್ಪಬಹುದು. ಪುರಾಣಗಳಲ್ಲಿ ತಿಳಿಸುವ ಎಲ್ಲಾಘಟನೆಗಳು ನಿಜವಲ್ಲ ಎಂದು ನಾವು ಒಪ್ಪಬಹುದು ಹಾಗೆಯೇ ಕೆಲವು ಘಟನೆಗಳು ಅಂದಿನ ಸಮಾಜದಲ್ಲಿ ನಡೆದ ಘಟನೆಗಳನ್ನಾದರಿಸಿಯೇ ಹೇಳಲ್ಪಟ್ಟಿದೆ ಎಂದೂ ಹೇಳಬಹುದು ಆದರೆ ವರ್ಣಿಸಿದಂತೆ ಸಂಪೂರ್ಣವೂ ಅದೇ ಪಾತ್ರಧಾರಿಗಳ ನಿಜ ಜೀವನ ಘಟನೆಗಳು ಎನ್ನುವುದು ಸಂಪೂರ್ಣವಾಗಿ ಒಪ್ಪಲು ಎಲ್ಲಾಘಟನೆಗಳಲ್ಲಿಯೂ ಸಾಧ್ಯವಿಲ್ಲ. ಹಾಗೆಯೇ ಕೆಲವು ಘಟನೆಗಳು ಘಟಿಸಿದ ಘಟನೆಗಳೇ ಇದ್ದರೂ ಇರಬಹುದು. ಅವುಗಳನ್ನೇ ಅತಿರಂಜಿತವಾಗಿ ವರ್ಣಿಸಿರಬಹುದು. ಆದುದರಿಂದ ನಾವು ಪುರಾಣಗಳನ್ನು ಅದರ ಪಾತ್ರಗಳನ್ನು ಶ್ರಧ್ಧಾಭಕ್ತಿಯಿಂದ ಅಲ್ಲಿನ ಸಕಾರಾತ್ಮ ಮೌಲ್ಯಗಳಿಂದ ಗೌರವಿಸಬೇಕು. ಹಾಗೂ ಅದನ್ನು ಅಳವಡಿಸಿಕೊಳ್ಳಬೇಕು. ನಕಾರಾತ್ಮಕ ವಿಷಯಗಳಿದ್ದರೆ ಅದನ್ನು ತ್ಯಜಿಸಬೇಕು.

ರಾಮಾಯಣ ಮಹಾಭಾರತಗಳು ಸತ್ಯಘಟನೆಗಳೇ ?

ಇಲ್ಲಿಯೂ ವಾಲ್ಮೀಕಿ ಹಾಗೂ ವ್ಯಾಸರ ಕಾಲದಲ್ಲಿ ಈ ಎರಡೂ ಘಟನೆಗಳು ನಡೆದಿವೆ ಆದರೂ ಅವೆಲ್ಲವೂ ಅವರು ವಿವರಿಸಿದಂತೆಯೇ ಯತಾವತ್ತಾಗಿ ನಡೆದಿದೆ ಎನ್ನಲಾಗುವುದಿಲ್ಲ. ರಾಮನ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿ ವಾಲ್ಮೀಕಿ ಮುನಿಗಳು ಸಮಾಜಕ್ಕೆ ಯಾವಮೌಲ್ಯವನ್ನು ತಲುಪಿಸಬೇಕೋ ಅದಕ್ಕೆ ಪೂರಕವಾಗಿ ನೈಜ ಪಾತ್ರಗಳೋಂದಿಗೆ ಕೆಲವು ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಕೆಲವು ಉಪಕಥೆಗಳನ್ನು ಹೇಳುತ್ತಾ ರಾಮಾಯಣವನ್ನು ತಮ್ಮ ಕಾವ್ಯಚಾತುರ್ಯದಿಂದ ಬರೆದಿದ್ದಾರೆ ಎನ್ನಬಹುದು. ಇದು ನಡೆದಘಟನೆಯನ್ನಾದರಿಸಿದ ಇತಿಹಾಸ ಕಥನವೇ ಆಗಿದೆ ಎಂದು ನಂಬಬಹುದಾಗಿದೆ. ಅನೇಕ ಸಾಕ್ಷಿ ಕುರುಹುಗಳು ನಮಗೆ ಇಂದು ರಾಮಾಯಣವನ್ನು ಅನುಸರಿಸಿ ಹೋದಾಗ ಸಿಗುತ್ತವೆ. ಕಥೆಯಲ್ಲಿಯೂ ಇತಿಹಾಸ ಹುದುಗಿರಬಹುದು ಆದರೆ ಇತಿಹಾಸವು ಕಥೆ ಆಗಬಾರದು. ಇಂದಿನ ನಮ್ಮ ಇತಿಹಾಸ ಎಡಪಂಥೀಯರಿಂದ ಹಾಗೂ ಧರ್ಮ ಭ್ರಷ್ಟರಾದ ಜಾತ್ಯಾತೀತ ಎಂದುಕರೆದು ಕೊಳ್ಳುವ ಹಿಂದೂ ವಿರೋಧಿ ರಾಜಕೀಯ ಪಕ್ಷ ಹಾಗೂ ನಾಯಕರಿಂದ  ಪ್ರೇರಿತವಾಗಿ ಸುಳ್ಳು ವಿಚಾರಗಳ ಸಂತೆ ಯಾಗಿದೆ. ಅದನ್ನು ನಾವು ಶುದ್ಧೀ ಕರಿಸಬೇಕಿದೆ.

ಹಾಗೆಯೇ ಮಹಾಭಾರತವೂ ಕೂಡಾ ಕಲಿಯುಗದ ಆರಂಭಕ್ಕೆ ಸ್ವಲ್ಪಮೊದಲು ನಡೆದ ಘಟನೆ ಎನ್ನುವುದನ್ನು ನಂಬಬಹುದು. ಕೆಲವುಕಡೆ  ಕೆಲವೊಂದು ವಿರೋಧಾಭಾಸಗಳು ಎದುರಾಗಬಹುದು ಅಂತಹ ಸಮಯದಲ್ಲಿ ಧರ್ಮಸಮ್ಮತವಾದ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ, ಸಮಾಜದ ಸಮಸ್ತ ಪ್ರಜಾಜನರ ಕಲ್ಯಾಣಕ್ಕೆ ಯೋಗ್ಯವಾದುದನ್ನು ಅಳವಡಿಸಿಕೊಂಡು, ಕ್ಷುದ್ರ ಎನ್ನುವಂತಹ ವಿಚಾರವನ್ನು ಗೌಣವಾಗಿಸಿಕೊಂಡು ಮುನ್ನಡೆಯುವುದೇ ಧರ್ಮಮಾರ್ಗ ವಾಗುವುದು. ಅಜ್ಞಾನಿಗಳು, ಅವಿವೇಕಿಗಳುಮ ನಕಾರಾತ್ಮಕ ವಿಚಾರಗಳನ್ನು ಕೆದಕಿ ಸಮಾಜದ ಸ್ವಾಸ್ಥ್ಯ ಹಾಳುಮಾಡಲು ಹವಣಿಸುತ್ತಿರುತ್ತಾರೆ. ಇಂತಹ ಅಲ್ಪಜನರಿಂದ ಸಜ್ಜನರು ಎಚ್ಚರದಿಂದಿರಬೇಕು ಹಾಗೂ ಸತ್ಯಮಾರ್ಗದಲ್ಲಿ ನಡೆಯಬೇಕು.

  • ಶ್ರೀಜಿ